ಗೊಂದಲದ ಗೂಡಿನ ನಡುವೆ ಭರವಸೆಯ ಕಿರಣ

ಹಕ್ಕಿಯ ಗೂಡಿನಲ್ಲಿ ಒಂದೆರಡು ಸಂಗತಿಗಳ ಬಗ್ಗೆ ಮಾತನಾಡಬೇಕು.

‘ವಿಕ್ರಾಂತ ಕರ್ನಾಟಕ’ ಎಂಬ ಕನ್ನಡ ವಾರಪತ್ರಿಕೆಯನ್ನು ಪ್ರಾರಂಭಿಸಿದ ರವಿ ಕೃಷ್ಣಾರೆಡ್ಡಿಯವರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ತಮ್ಮ ಬ್ಲಾಗಿನಲ್ಲಿ ಅವರು ನನ್ನ ಬಗ್ಗೆ ಬರೆದದ್ದನ್ನು ಪ್ರಸ್ತಾಪಿಸಿದ್ದೆ. ಅವರು ಈಗ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾರೆ. ಒಂದಿನಿತೂ ವಾಮಮಾರ್ಗವನ್ನು ಬಳಸದೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಿಸಬೇಕು ಎಂಬುದು ಅವರ ಅಭಿಲಾಶೆ. ತಮ್ಮ ಪರಿಚಯ ಹಾಗೂ ರಾಜಕೀಯ ನಿಲುವುಗಳನ್ನು ಸ್ಪಷ್ಟಪಡಿಸಲು ಒಂದುಅಂತರ್ಜಾಲ ತಾಣ ತೆರೆದಿದ್ದಾರೆ. ಹಿಂದೊಮ್ಮೆ ಅವರು ತಮ್ಮ ‘ಅಮೇರಿಕಾದಿಂದ ರವಿ’ ಅಂಕಣದಲ್ಲಿ ಅಮೇರಿಕಾದಲ್ಲಿ ನಡೆಯುವ ಚುನಾವಣೆಯಲ್ಲಿ ಹೇಗೆ ಒಂದು ಪಕ್ಷ ತನಗೆ ಹರಿದು ಬರುವ ದೇಣಿಗೆ ರೂಪದ ಹಣದ ಪೈಸೆ-ಪೈಸೆಗೂ ಲೆಕ್ಕ ಕೊಡಬೇಕು ಎಂಬುದನ್ನು ಪ್ರಸ್ತಾಪ ಮಾಡಿದ್ದರು. ನಮ್ಮ ರಾಜಕಾರಣದಲ್ಲಿ ಇಂಥ ವ್ಯವಸ್ಥೆ ಇದ್ದರೆ ಚೆಂದ ಎಂದು ಅಭಿಪ್ರಾಯ ಪಟ್ಟಿದ್ದರು. ಆ ಮೇಲ್ಪಂಕ್ತಿಯನ್ನು ಪಾಲಿಸುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ಚುನಾವಣೆಯ ಪ್ರಚಾರದ ಖರ್ಚಿಗೆ ಚುನಾವಣಾ ಆಯೋಗ ವಿಧಿಸಿರುವ ಹತ್ತು ಲಕ್ಷದ ಮಿತಿಯೊಳಕ್ಕೆ ಹಣವನ್ನು ಐಟಿ ಉದ್ಯೋಗಗಳಿಂದ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದಾರೆ. ಜಯನಗರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಮತದಾರರು ಹಾಗೂ ಐಟಿ ಉದ್ಯೋಗಿಗಳಿರುವುದರಿಂದಾಗಿ ತಮ್ಮ ಯೋಜನೆಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಬಹುದು ಎಂಬುದು, ಎಲ್ಲಾ ಕಟಕಿ, ವ್ಯಂಗ್ಯಗಳ ನಡುವಿನ ಅವರ ಆಶಾಭಾವ. ರವಿಯವರ ಉತ್ಸಾಹಕ್ಕೆ ಪುರಸ್ಕಾರ ಸಿಕ್ಕಲಿ, ಅವರು ನಿರಾಶರಾಗದಿರಲಿ ಎಂದು ಹಾರೈಸುವೆ.

ನನ್ನ ವೈಚಾರಿಕ ಅಲೆಮಾರಿತನದ ಬಗ್ಗೆ, ಹಿಂದುತ್ವ, ಜಾತ್ಯಾತೀತವಾದಗಳ ಸತ್ವಹಾಗೂ ಟೊಳ್ಳಿನ ಬಗೆಗಿನ ಗೊಂದಲವನ್ನು ನನ್ನ ಹಲವಾರು ಪೋಸ್ಟುಗಳಲ್ಲಿ ವ್ಯಕ್ತಪಡಿಸಿದ್ದೇನೆ. ಎಷ್ಟೋ ಬಾರಿ ನನ್ನ ನಿಲುವುಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗಿವೆ. ಅಖಂಡವಾದ ರಾಷ್ಟ್ರೀಯತೆಯಿಂದ ಪ್ರಚಂಡ ಎಡಪಂಥೀಯ ಧೋರಣೆಯ ವರೆಗೆ ಎಲ್ಲಾ ನೆಲೆಗಳಲ್ಲೂ ನನ್ನ ವೈಚಾರಿಕತೆಯನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ವಿಫಲನಾಗಿದ್ದೇನೆ. ಈಗೀಗ ನನಗೆ ಸ್ಪಷ್ಟವಾಗುತ್ತಿರುವ ಅಂಶವೆಂದರೆ, ನನ್ನ ವಿಫಲತೆಗೆ ಮುಖ್ಯವಾದ ಕಾರಣ ನಾನು ನನ್ನ ವೈಚಾರಿಕತೆಯನ್ನು ರೂಪಿಸಿಕೊಳ್ಳಲು ನಮ್ಮ ಮಾಧ್ಯಗಳನ್ನು ನೆಚ್ಚಿಕೊಂಡದ್ದು. ತುಂಬಾ ಚಿಕ್ಕಂದಿನಲ್ಲೇ ಒಬ್ಬ ಲೇಖಕನ ಪ್ರಭಾವಕ್ಕೆ ಒಳಗಾದರೆ, ಒಬ್ಬನ ವಿಚಾರಧಾರೆಗೆ ಮನಸೋತರೆ, ಒಬ್ಬನ ಚರಿಶ್ಮಾಗೆ ಬಲಿಯಾದರೆ ಮುಂದೆ ಆ ಪ್ರಭಾವದಿಂದ ಹೊರಬಂದು ಸ್ವಂತ ಚಿಂತನೆಯನ್ನು ಬೆಳೆಸಿಕೊಳ್ಳುವುದು ಕಷ್ಟವಾಗುತ್ತದೆ. ವಿಪರೀತವಾದ inconsistancy ತಲೆದೋರುತ್ತದೆ. ಹಿಂದೆ ಮನಃಪೂರ್ತಿಯಾಗಿ ಮಾಡಿದ ವಾದಗಳೆಲ್ಲವೂ ಹುರುಳಿಲ್ಲದವಾಗಿ ಕಾಣಿಸುತ್ತವೆ. ನಮ್ಮ ಮೇಲೆಯೇ ನಮಗೆ ನಂಬಿಕೆ ಹೊರಟಂತಾಗಿಬಿಡುತ್ತದೆ.

ಈ ಗೊಂದಲಗಳಲ್ಲಿ ಕೆಲಕಾಲ ತಲೆ ಕೆಡಿಸಿಕೊಂಡ ನಂತರ ನಾನು ಸಣ್ಣ ಬ್ಲಾಗುಗಳಲ್ಲಿ, ಪತ್ರಿಕೆಗಳಲ್ಲಿ ಸ್ಪಷ್ಟವಾದ ನಿಲುವುಗಳನ್ನಿಟ್ಟುಕೊಂಡು ಬರೆಯುತ್ತಿರುವ ಹಿರಿಯರನ್ನು ಕಂಡೆ. ಅವರ ಮಾಗಿದ ವೈಚಾರಿಕತೆ ನಾನು ಅದುವರೆಗೂ ಕಂಡ ಅಬ್ಬರದ ಪ್ರಚೋದನಾಕಾರಿ ಚಿಂತನೆಗಳಿಗಿಂತ ಹೆಚ್ಚು ಸಶಕ್ತವಾದದ್ದಾಗಿ ಕಂಡಿತು. ಅವರ ಬಳಿ ನನ್ನ ಗೊಂದಲಗಳನ್ನು ತೋಡಿಕೊಂಡು ಸೂಕ್ತವಾದ ಮಾರ್ಗದರ್ಶನವನ್ನು ಕೋರೋಣ ಅನ್ನಿಸಿತು. ಅದಕ್ಕೆ ಪೂರಕವಾಗಿ ಡಿ.ಎಸ್.ನಾಗಭೂಷಣ್ ‘ವಿಕ್ರಾಂತ ಕರ್ನಾಟಕ’ದ ತಮ ಅಂಕಣದಲ್ಲಿ ಯುವ ಜನಾಂಗಕ್ಕೆ ತಮ್ಮ ಚಿಂತನೆಯನ್ನು ಪರಿಚಯಿಸುವ ಉತ್ಶಾದ ಬಗ್ಗೆ ಬರೆದಿದ್ದರು. ಅಂತರ್ಜಾಲದಲ್ಲಿ ಅವರ ಬ್ಲಾಗು ಇದ್ದುದರಿಂದ ನಾನು ಅವರಿಗೆ ಒಂದು ಪತ್ರವನ್ನು ಕಳುಹಿಸಿದ್ದೆ.

ಸರ್ ನಮಸ್ಕಾರ,
ನಾನೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ಬೆಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದೇನೆ. ನನಗೆ ಬರವಣಿಗೆಯಲ್ಲಿ ಆಸಕ್ತಿಯಿದೆ. ಸಾಹಿತ್ಯವನ್ನು ಓದುವುದು ಹವ್ಯಾಸ.

ಈ ಹಿಂದೆ ನಿಮ್ಮ ಬರಹವೊಂದರಲ್ಲಿ ಎಡ ಪಕ್ಷಗಳು ಹಾಗೂ ಕಾಂಗ್ರೆಸ್ಸಿನ ರಾಜಕಾರಣದ ಬಗ್ಗೆ ಬರೆಯುತ್ತಾ ಅವರು ಕೋಮುವಾದಿ ಬಿಜೆಪಿಯನ್ನು ಹೊರಗಿಡುವುದಕ್ಕಾಗಿ ನಮಗೆ ಅಧಿಕಾರಕ್ಕೆ ತನ್ನಿ ಎನ್ನುತ್ತಿರುವುದು ಅದನ್ನೇ ತಮ್ಮ ಪ್ರಣಾಳಿಕೆಯಾಗಿಸಿಕೊಂಡಿರುವುದರ ಬಗ್ಗೆ ಬರೆದಿದ್ದನ್ನು ಓದಿ ನನಗನ್ನಿಸಿದ್ದು ಹೀಗೆ.

ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ತಮ್ಮ ರಾಜಕೀಯ ಸಿದ್ಧಾಂತದ ಸ್ಪಷ್ಟತೆಯನ್ನು ನಮ್ಮಂತಹ ಸಾಮಾನ್ಯ ಯುವಕರಿಗೆ ಮುಟ್ಟುವ ಹಾಗೆ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಎಲ್ಲಾ ವಿದ್ಯಮಾನಗಳ ಬಗ್ಗೆ ಸ್ಪಷ್ಟವಾದ (ಅದು ನ್ಯಾಯ ಸಮ್ಮತವಾಗಿರಬೇಕಿಲ್ಲ) ನಿಲುವುಗಳನ್ನು ಕೊಟ್ಟು ಅದಕ್ಕೆ ಸಾಕ್ಷಿಗಳನ್ನು ಕೊಡುವ ಬಲಪಂಥೀಯತೆಗೆ ಸಹಜವಾಗಿ ಆಕರ್ಷಣೆ ಬೆಳೆಯುತ್ತದೆ. ಮೋದಿಯನ್ನು ವಿರೋಧಿಸುವಲ್ಲಿ ನಮ್ಮ ಮಾಧ್ಯಮಗಳು ಹಾಕಿದ ಶ್ರಮದಲ್ಲಿ ಅರ್ಧದಷ್ಟನ್ನು ಮೋದಿ ಪ್ರತಿಪಾದಿಸುವ ಸಿದ್ಧಾಂತದ ಅಪಾಯಗಳು ಹಾಗೂ ಅದಕ್ಕೆ ಪರ್ಯಾಯವಾದ ಚಿಂತನೆಯನ್ನು ಪ್ರಚುರ ಪಡಿಸುವಲ್ಲಿ ಮಾಧ್ಯಮಗಳು ಎಡವಿದವೇ?

ವಿಪರೀತವಾದ ತಾತ್ವಿಕ ಚಿಂತನೆಯ ಹಿನ್ನೆಲೆ, ಪೂರ್ವಾಗ್ರಹವಿಲ್ಲದ ಪ್ರಗತಿಪರ ಚಿಂತನೆಯನ್ನು ಬೆಳೆಸಿಕೊಳ್ಳುವುದಕ್ಕೆ ಬೇಕಾದ ಬದ್ಧತೆಗಳಿಗಿಂತ ಅತಿ ಸುಲಭವಾಗಿ ಹೊಂದಬಹುದಾದ ಬಲಪಂಥೀಯ ಸಿದ್ಧಾಂತ ನಮಗೇಕೆ ಪ್ರಿಯವೆನಿಸುತ್ತದೆ?

ಏಪ್ರಿಲ್ ೪ರ ವಿಕ್ರಾಂತ ಕರ್ನಾಟಕದ ನಿಮ್ಮ ಅಂಕಣಬರಹವನ್ನು ಓದಿದಾಗ, ನಿಮ್ಮಲ್ಲಿ ಆತಂಕ ಹುಟ್ಟಿಸಿದ ಯುವಪೀಳಿಗೆಯ ಮನಸ್ಥಿತಿಯ ಬಹುಪಾಲನ್ನು ನಾನೂ ಸಹ ಹೊಂದಿದ್ದೇನೆ. ಆದರೆ ನನಗೆ ಆ ಬಗ್ಗೆ guilt ಇದೆ. ನನ್ನ ಪ್ರೊಫೈಲ್‌ನಲ್ಲಿಂದ ನಾನು ಬರೆದಿರುವ ಲೇಖನ, ಬ್ಲಾಗ್ ಬರಹಗಳನ್ನು ಒಮ್ಮೆ ಅವಲೋಕಿಸಿದರೆ ನನ್ನ ಮನಸ್ಥಿತಿಯ ಸ್ವರೂಪ ನಿಮಗೆ ಸಿಗಬಹುದು ಎಂದು ಆಶಿಸುತ್ತೇನೆ. ಆದರೆ ನನ್ನ ಸುತ್ತ ಇರುವ ಬಲಪಂಥೀಯತೆಯ ಪ್ರಭಾವವನ್ನು ಮೀರಲು ನನಗೆ ಸಾಕಷ್ಟು ಅಂತಃಸತ್ವದ ಆವಶ್ಯಕತೆ ಇದೆ. ನನ್ನ ಚಿಂತನೆಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕು ಅನ್ನಿಸುತ್ತಿದೆ.

ನಾನು ಎಲ್ಲಿಂದ ಪ್ರಾರಂಭಿಸಲಿ? ನನಗೆ ಮಾರ್ಗದರ್ಶನದ ಆವಶ್ಯಕತೆಯಿದೆ. ನನ್ನನ್ನು ನನ್ನ ಪೂರ್ವಾಗ್ರಹಗಳಿಂದ ಬೇರ್ಪಡಿಸಬಲ್ಲ, ಸ್ವತಂತ್ರವಾದ ಚಿಂತನೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುವ ಪುಸ್ತಕಗಳನ್ನೋ, ಚಿಂತನೆಗಳನ್ನೋ ನನಗೆ ಪರಿಚಯಿಸಿದರೆ ನಾನು ಕೃತಜ್ಞ. ನಿಮ್ಮ ಮಾರ್ಗದರ್ಶನದ ಪ್ರತಿಕ್ರಿಯೆಗಾಗಿ ನಿರೀಕ್ಷಿಸುತ್ತಿರುತ್ತೇನೆ. ನಿಮ್ಮ ಸಮಯಕ್ಕಾಗಿ ಧನ್ಯವಾದಗಳು.

ಸುಪ್ರೀತ್.ಕೆ.ಎಸ್

ಅದರಲ್ಲಿ ನನ್ನ ಗೊಂದಲಗಳನ್ನು ಹೇಳಿಕೊಂಡು ಸೂಕ್ತ ಮಾರ್ಗದರ್ಶನ ಕೇಳಿದ್ದೆ. ಉತ್ತರ ಬರುತ್ತದೆ ಎಂದು ನಿರೀಕ್ಷಿರಲಿಲ್ಲ. ಇಂದು ಸಂಪದದಲ್ಲಿ ಅವರ ಲೇಖನವೊಂದನ್ನು ಓದುವಾಗ ಅವರು ತಮ್ಮ ಲೇಖನದಲ್ಲಿ ನನ್ನ ಪತ್ರವನ್ನು ಪ್ರಸ್ತಾಪಿಸಿ ಉತ್ತರಿಸಿರುವುದನ್ನು ಕಂಡು ಕುತೂಹಲಗೊಂಡೆ. ವಿವರವಾಗಿ ಅವರ ಪತ್ರವನ್ನು ಓದಿ ನನ್ನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಅವರ ಮೇಲೆ ಗೌರವ ಇಮ್ಮಡಿಯಾಯ್ತು.

ನನ್ನಂಥದ್ದೇ ಆದ ಗೊಂದಲಗಳಿರುವವರಿಗೆ ನಾಗಭೂಷಣ್‌ರ ಈ ಲೇಖನ ಒಳ್ಳೆಯ ದಿಕ್ಸೂಚಿಯಾಗಬಲ್ಲದು. ತಮ್ಮ ಲೇಖನದಲ್ಲಿ ಅವರು ವ್ಯಕ್ತಪಡಿಸಿದ ಕೆಲವು ವಿಚಾರಗಳನ್ನು ಸಂಪದದಿಂದ ಆಯ್ದು ಇಲ್ಲಿ ಕೊಟ್ಟಿರುವೆ:

ಇತ್ತೀಚೆಗೆ ನನ್ನ ಇದೇ ಲೇಖನದ ಬಗ್ಗೆ ಕೆ.ಎಸ್.ಸುಪ್ರೀತ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಪ್ರತಿಕ್ರಿಯೆಯೊಂದನ್ನು, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಅಗತ್ಯ ಎಂಬರ್ಥದಲ್ಲಿ ನನಗೆ ರವಾನಿಸಿದ್ದಾರೆ. ಇವರು ನನ್ನ ಈ ಲೇಖನದಲ್ಲಿ ವ್ಯಕ್ತವಾಗಿರುವ ಆತಂಕಗಳ ಬಗ್ಗೆ ತಾತ್ವಿಕವಾಗಿ ಆಂತರಂಗಿಕ ಸಹಮತ ಹೊಂದಿರುವುದಾದರೂ, ಬಹಿರಂಗ ವಾತಾವರಣ ಅದಕ್ಕೆ ಪೂರಕವಾಗಿಲ್ಲದಿರುವುದರ ವಾಸ್ತವದ ಬಗ್ಗೆ ಬರೆದಿದ್ದಾರೆ. ತಾವು ಸಹ ಇಂತಹ ವಾತಾವರಣದ ಸಹಜ ಬಲಿಯಾಗಿದ್ದು, ಇದರಿಂದ ತಮ್ಮಂತಹವರು ಹೊರ ಬರಲು ಪೂರಕವಾಗುವಂತಹ ವಾತಾವರಣವನ್ನು ನಿರ್ಮಿಸಲು ಸೆಕ್ಯುಲರ್‌ವಾದಿಗಳು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗೇ, ಈ ವಿಷಯದಲ್ಲಿ ಮಾರ್ಗದರ್ಶಕವಾಗುವಂತಹ ಸಾಹಿತ್ಯವನ್ನೂ ಸೂಚಿಸಿ ಎಂದು ಸುಪ್ರೀತ್ ಕೇಳಿದ್ದಾರೆ.

ಮೊದಲಿಗೆ, ನಾನೇನೂ ಇಂದಿನ ಸೆಕ್ಯುಲರ್ವಾದಿಗಳ ವಕ್ತಾರನಲ್ಲ ಎಂದು ಸ್ಪಷ್ಟಪಡಿಸ ಬಯಸುವೆ. ಈ ಸೆಕ್ಯಲರ್‌ವಾದವೆಂಬುದೇ ಅನುಮಾನಾಸ್ಪದತೆಗೆ ಈಡಾಗಿರುವ ಇಂದಿನ ರಾಜಕೀಯ ಸನ್ನಿವೇಶದಲ್ಲ್ಲಿ ನಿಂತು, ಕೋಮುವಾದದ ವಿರುದ್ಧ ಮಾತನಾಡುವಾಗ ಅನೇಕ ತಪ್ಪು ಕಲ್ಪನೆಗಳುಂಟಾಗುವ ಸಂಭವವಿದೆ. ಏಕೆಂದರೆ, ಕೋಮುವಾದದ ವಿರುದ್ಧ ಏಕೈಕ ಅಸ್ತ್ರ ಸೆಕ್ಯುಲರ್‌ವಾದ ಎಂಬ ನಂಬಿಕೆಯನ್ನು ಸೃಷ್ಟಿಸಲಾಗಿದೆ. ಮೂಲತಃ ಭೌತವಾದಿ ರಾಜಕಾರಣದ ಪ್ರತಿಪಾದಕರಾದ ಕಟ್ಟಾ ಎಡಪಂಥೀಯರು ಸೃಷ್ಟಿಸಿರುವ ನಂಬಿಕೆಯಿದು. ಆದರೆ ಸೆಕ್ಯುಲರಿಸಂ ಎಂದರೇನೆಂದು ಈವರೆಗೆ ಈ ಯಾರೂ ಖಚಿತವಾಗಿ, ನಿರ್ದಿಷ್ಟವಾಗಿ ನಿರೂಪಿಸಿಲ್ಲ. ಅದಕ್ಕೆ ನಮ್ಮ ಯಾವುದೇ ಭಾರತೀಯ ಭಾಷೆಯಲ್ಲೂ ಸಮರ್ಪಕವಾದ ಸಮಾನ ಶಬ್ದವನ್ನು ಟಂಕಿಸಲಾಗಿಲ್ಲ. ಧರ್ಮ ನಿರಪೇಕ್ಷತೆ ಎಂಬ ಶಬ್ದದಿಂದ ಹಿಡಿದು ಇದಕ್ಕೆ ತದ್ವಿರುದ್ಧ ಅರ್ಥವಿರುವ ಸರ್ವಧರ್ಮ ಸಮಭಾವ ಎಂಬ ಶಬ್ದದವರೆಗೆ ಇದರರ್ಥವನ್ನು ಎಳೆದಾಡಲಾಗಿದೆ! ಇದಕ್ಕೆ ಕಾರಣ ಇದು ಆಧುನಿಕತೆಯ ಹಂಬಲದಲ್ಲಿ ನಮ್ಮ ಸಂವಿಧಾನ ನಿರ್ಮಾತೃಗಳು ಐರೋಪ್ಯ ರಾಜಕಾರಣದಿಂದ ಕಿತ್ತು ತಂದು ಇಲ್ಲಿ ನೆಡಲಾಗಿರುವ ಪರಿಕಲ್ಪನೆಯಾಗಿರುವುದೇ ಆಗಿದೆ.

ಹಾಗೇ ಸುಪ್ರೀತ್ ಅವರಿಗೆ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರನ್ನು ಮುಕ್ತ ಮನಸ್ಸಿನಿಂದ ಓದಿ ಎಂದು ಸೂಚಿಸಬಯಸುವೆ. ರಾಷ್ಟ್ರ ವಿಭಜನೆ ಸೃಷ್ಟಿಸಿದ್ದ ಕೋಮು ದಳ್ಳುರಿಯ ಮಧ್ಯೆಯೂ, ಪಾಕಿಸ್ಥಾನಕ್ಕೆ ಕೊಡಬೇಕಾದ ನಿಧಿಯನ್ನು ಕೊಡುವಂತೆ ಸಾರ್ವಜನಿಕವಾಗಿ ಒತ್ತಾಯಿಸಿ ಹಿಂದೂ ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾದ ಸನಾತನ ಹಿಂದೂ ಎನ್ನಿಸಿಕೊಂಡಿದ್ದ ಗಾಂಧಿ; ತಾವು ರೂಪಿಸಿದ್ದ ಸಮಗ್ರ ಹಿಂದೂ ನಾಗರಿಕ ಸಂಹಿತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅವಕಾಶ ಕೊಡದ ಸರ್ಕಾರದ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರಬಂದ ಆಧುನಿಕತಾವಾದಿ ಅಂಬೇಡ್ಕರ್ ಮತ್ತು ಸಾಮಾನ್ಯ ನಾಗರಿಕ ಸಂಹಿತೆಯ ಜಾರಿಯನ್ನು ತಮ್ಮ ಪಕ್ಷದ ಒಂದು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಪ್ರಚಾರ ಮಾಡಬಲ್ಲವರಾಗಿದ್ದ ರಾಜಕೀಯ ದುಸ್ಸಾಹಸಿ ಲೋಹಿಯಾ ಹೊಸ ರಾಷ್ಟ್ರಕ್ಕೆ ಹೊಸ ಧರ್ಮ ಸಂಹಿತೆಯೊಂದನ್ನು ರೂಪಿಸಿ ಸೆಕ್ಯುಲರಿಸಂಗೆ ಹೊಸ ಅರ್ಥ ಕೊಡಲೆತ್ನಿಸಿದವರು. ಇವರ ಜೊತೆಗೇ, ಈಚಿನ ಅಸ್ಘರಾಲಿ ಇಂಜಿನಿಯರರ ಪುಸ್ತಕ - ಲೇಖನಗಳನ್ನು ಓದಿದರೆ ಚೆನ್ನು. ಆಗ ಆರೋಗ್ಯಕರ ವರ್ತಮಾನವನ್ನು ಕಟ್ಟಲು ಚರಿತ್ರೆಯನ್ನು ಎಷ್ಟು ಎಚ್ಚರಿಕೆ ಮತ್ತು ವಿವೇಕಗಳಿಂದ ಅರ್ಥ ಮಾಡಿಕೊಂಡು ಬಳಸಿಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಾಗುತ್ತದೆ.

ಪ್ರತಿದಿನದ ಬ್ಲಾಗು

ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ!

ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ, ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು, ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.

ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ? ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು ಸೇರಿಕೊಂಡು ಬಿಟ್ಟಿವೆಯೇ?

ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ, ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧೇನಿಸುತ್ತಾ ಬದುಕು ಕಳೆದುಬಿಡಲಾ ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.

ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ, ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ತೊರೆಯುವ ಸಂತೋಷವನ್ನು, ನಾನು ಕಂಡುಕೊಂಡ ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!

ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?

………………………………………………………….

ಶೇಷ ವಿಶೇಷ: ಇದೊಂದು ವೈಯಕ್ತಿಕ ಅನಿಸಿಕೆ. ಒಂದು ಅಬ್ಸರ್ವೇಶನ್. ಮನೆಯಲ್ಲಿ ನಾಲ್ಕು ಮಂದಿ ಕುಳಿತು ಟಿವಿ ನೋಡುತ್ತಿರುತ್ತಾರೆ. ಅಪ್ಪ, ಅಮ್ಮ, ಅಕ್ಕ, ತಂಗಿ ಹೀಗೆ ಬೇರೆ ಬೇರೆ ವಯೋಮಾನದವರು ಅಲ್ಲಿರುತ್ತಾರೆ. ಟಿ.ವಿಯಲ್ಲಿ ಒಂದು ಕಾರ್ಯಕ್ರಮ ಬರುತ್ತಿರುತ್ತದೆ. ಒಂದು ವ್ಯಕ್ತಿ ಚಿತ್ರಣ. ಒಬ್ಬ ವ್ಯಕ್ತಿಯ ಸಾಧನೆ, ಜೀನವದ ಬಗ್ಗೆ ಕಾರ್ಯಕ್ರಮದಲ್ಲಿ ಬಿತ್ತರವಾಗುತ್ತಿರುತ್ತದೆ. ಆತ ಬೆಳಿಗ್ಗೆ ಎರಡಕ್ಕೇ ಎದ್ದು ಕೆಲಸ ಪ್ರಾರಂಭಿಸುತ್ತಾನೆ. ಆತನಿಗೆ ನೂರು ವರ್ಷವಾದರೂ ಕಣ್ಣುಗಳು ನಿಚ್ಚಳವಾಗಿವೆ. ಆತ ಇಂಗ್ಲೀಷು ಮೆಡಿಸನ್ನು ತೆಗೆದುಕೊಳ್ಳುವುದೇ ಇಲ್ಲವಂತೆ. ಆತ ಮನೆ ಮನೆಗೆ ಪೇಪರ್ ಹಾಕಿ ಹಣ ಸಂಪಾದಿಸಿ ಓದುತ್ತಿದ್ದ - ಹೀಗೆಲ್ಲಾ ಒಬ್ಬ ವ್ಯಕ್ತಿಯ ವಿವರಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತಿರುತ್ತವೆ.
ಆಗ ಅಂತಹ ವಿವರಗಳನ್ನು ಕೇಳಿಸಿಕೊಂಡಾಗ ಅವರಲ್ಲಿ ಒಬ್ಬರು ಉಳಿದವರಿಗೆ ‘ನೋಡು, ಅವ್ರು ಬೆಳಿಗ್ಗೆ ಎರಡಕ್ಕೇ ಏಳ್ತಾರಂತೆ. ನೋಡು, ಎಷ್ಟು ಗಟ್ಟಿ ಮುಟ್ಟಾಗಿದ್ದಾರೆ’ ಎನ್ನುತ್ತಿರುತ್ತಾರೆ, ಸಹಜವಾಗಿ. ಹಾಗಂತ ಉಳಿದವರೇನು ಅದನ್ನು ಕೇಳಿರುವುದಿಲ್ಲ ಎಂದೇನಿಲ್ಲ ಆದರೂ ಇವರು ಆ ವಿವರಗಳನ್ನು ಹೈಲೈಟ್ ಮಾದುವುದರಲ್ಲಿ ವಿಪರೀತ ಆಸಕ್ತಿ ವಹಿಸಿದವರಂತಾಡುತ್ತಾರೆ.
ಇದಕ್ಕೆ ಮನೋವೈಜ್ಞಾನಿಕ ಕಾರಣವೇನಾದರೂ ಇದೆಯಾ ಅಂತ ಯೋಚಿಸಿದೆ. ಆಗ ನನಗೆ ಹೊಳೆದದ್ದು, ಒಬ್ಬ ವ್ಯಕ್ತಿಯ ಬಗ್ಗೆ ಅಂತಹ ವಿವರಗಳನ್ನು ಕೇಳುವಾಗ ನಮ್ಮ ಮನಸ್ಸು ಆತನನ್ನು ನಮ್ಮೊಂದಿಗೆ ಹೋಲಿಸಿಕೊಳ್ಳುತ್ತದೆ. ಮನಸ್ಸು ನಮ್ಮನ್ನು ತಿವಿಯಲು ಶುರುಮಾಡುತ್ತದೆ, ‘ಹೂಂ, ನೋಡು ನೀನೇನು ಮಾಡಿದ್ದೀಯಾ…’ ಎಂದು ಅಣಕಿಸುತ್ತದೆ. ಆ ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕೆ ನಾವು ಅದೇ ಕೆಲಸವನ್ನು ಉಳಿದವರನ್ನು ಉದ್ದೇಶಿಸಿ ಮಾಡುತ್ತೇವೆ. ನಮಗೇನೂ ಸಂಬಂಧವಿಲ್ಲವೆನ್ನುವಂತೆ ವೈಯಕ್ತಿಕ ಆತ್ಮ ವಿಶ್ಲೇಷಣೆಯನ್ನು ಸಾರ್ವತ್ರಿಕ ಗೊಣಗಾಟವಾಗಿಸಿ ಬಚಾವಾಗುತ್ತೇವೆ. ನನ್ನ ವಿಶ್ಲೇಷಣೆ ಸರಿಯಾ?

ಹದಿಹರೆಯದ ತುಡಿತಗಳು ಹಾಗೂ ನನ್ನ ಸಂಕಟ

ನನ್ನ ಹಾಸ್ಟೆಲ್ ದಿನಗಳ ಅನುಭವಗಳನ್ನು ಬರೆಯಬೇಕು ಎಂದು ತುಂಬಾ ಸಲ ಅಂದುಕೊಂಡದ್ದಿದೆ. ಆದರೆ ಅದು ಅಷ್ಟು ಸುಲಭಕ್ಕೆ ಸಾಧ್ಯವಾಗುವ ಹಾಗೆ ಕಾಣುತ್ತಿಲ್ಲ. ಹಿಂದೆಂದೋ ನಡೆದದ್ದರ ಬಗ್ಗೆ ಬರೆಯುವುದೇ ಆಗಿದ್ದರೆ ಈ ಚಿಂತೆ ಇರುತ್ತಿರಲಿಲ್ಲ. ಕಳೆದು ಹೋದ ಘಟನೆಗಳ ಟ್ರಂಕನ್ನು ತೆರೆದು ಕೈಗೆ ಸಿಕ್ಕಿದ್ದನ್ನು ಬರಹಕ್ಕೆ ಇಳಿಸಿಬಿಡಬಹುದಿತ್ತು. ಭೂತವನ್ನು ದಾಖಲಿಸಿಡುವುದು ಕಷ್ಟವಲ್ಲವೇ ಅಲ್ಲ. ಇನ್ನು ಮುಂದಿನದರ ಬಗ್ಗೆ ಬರೆಯಲಿಕ್ಕೂ ಯಾವ ಅಡ್ಡಿಯೂ ಇರುವುದಿಲ್ಲ. ಮುಂದೆಂದೋ ನಾನು ಹಾಗಾಗಬೇಕು, ಹಾಗಿರಬೇಕು ಎಂದು ಬರೆಯುವುದಕ್ಕೆ ಕಷ್ಟವಾಗದು. ಕಣ್ಣಿಗೆ ಕಾಣದ ಸಂಗತಿಗಳ ಬಗ್ಗೆ ಚರೆಯಲಿಕ್ಕೆ, ಮಾತಾಡಲಿಕ್ಕೆ, ಹರಟೆ ಕೊಚ್ಚುವುದಕ್ಕೆ, ವಾದ ಮಾಡುವುದಕ್ಕೆ, ಗುಂಪು ಕಟ್ಟಿಕೊಂಡು ಬಡಿದಾಡಲಿಕ್ಕೆ ಎಲ್ಲಿದೆ ತೊಂದರೆ? ನನ್ನ ಸಂಕಟಕ್ಕೆ ಕಾರಣವಾಗಿರುವುದು ನಾನು ವರ್ತಮಾನವನ್ನು ಬರೆಯಬೇಕಿರುವುದರಿಂದ.

ಇದೇ ವಿಚಾರವನ್ನು ಸ್ವಲ್ಪ ಲಂಬಿಸಿ ಬರೆಯಬೇಕು ಎನ್ನಿಸುತ್ತಿದೆ. ನಾನೀಗ ಒಬ್ಬ ಕಾಲೇಜು ವಿದ್ಯಾರ್ಥಿ. ಎಸ್.ಎಸ್.ಎಲ್.ಸಿ ಮುಗಿದಾಗಿನಿಂದಲೇ ಮನೆಯಿಂದ ಹೊರಗೆ ಹಾರಿದವನು. ಹಾಸ್ಟೆಲ್ಲುಗಳಲ್ಲಿ ಅಲೆದಾಡಿದವನು. ಈಗಲೂ ನಾನು ಮನೆಯಿಂದ ದೂರವಿದ್ದೇನೆ, ಹಾಸ್ಟೇಲೊಂದರಲ್ಲಿ. ಈ ಅನುಭವಗಳ ಬಗ್ಗೆ ಬರೆಯುವುದು ಹೇಗೆ? ಈಗ ನನ್ನ ಬಾಲ್ಯದ ಬಗ್ಗೆ, ಅಂದಿನ ಗೆಳೆಯರ ಬಗ್ಗೆ ಬರೆ ಎಂದರೆ ಸರಾಗವಾಗಿ ಬರೆದುಬಿಡಬಲ್ಲೆ. ದೊಗಲೆ ಚಡ್ಡಿ ಉದುರದ ಹಾಗೆ ಪಿನ್ನು ಸಿಕ್ಕಿಸಿಕೊಂಡು, ಆಗ ತಾನೆ ಇನ್ ಶರ್ಟ್ ಮಾಡುವುದು ಕಲಿಯುತ್ತಿದ್ದುದರ ಪರಿಣಾಮವಾಗಿ ಶರ್ಟನ್ನು ಚಡ್ಡಿಯೊಳಕ್ಕೆ ತೂರಿಸಿಕೊಂಡು ತೋಳುಗಳ ಬಳಿಯ ಶರ್ಟಿನ ಬಟ್ಟೆಯನ್ನೇ ಕರ್ಚೀಫು ಮಾಡಿಕೊಂಡು ಮೂಗನ್ನೂ, ಐಸ್ ಕ್ರೀಮು ತುಂದ ಬಾಯನ್ನೂ, ತಣ್ಣಿರಲ್ಲಿ ತೊಳೆದ ಹಸಿ ಮುಖವನ್ನೂ, ಬಿಸಿಲಿನಲ್ಲಿ ಆಡಿದ ಆಟ ಹಣೆಯಲ್ಲಿ ಹುಟ್ಟಿಸಿದ ಬೆವರಿನ ಹನಿಗಳನ್ನೂ ಒರೆಸಿಕೊಳ್ಳುತ್ತಾ ದೊಡ್ಡವರ ಬಳಿ ಸ್ವಚ್ಛತೆಯ ಪಾಠ ಹೇಳಿಸಿಕೊಳ್ಳುತ್ತಾ, ನಮ್ಮ ನಡುವೆಯೇ ಇದ್ದ, ಜಗತ್ತಿನ ಅದ್ಭುತಗಳಲ್ಲೊಂದಾದ, ಎಂದೂ ಶರ್ಟು, ಚಣ್ಣಗಳನ್ನು ಕೊಳೆ ಮಾಡಿಕೊಳ್ಳದ ಗೆಳೆಯನನ್ನು ಕಂದು ಕರುಬುತ್ತಾ, ಅವನನ್ನು ಹಳಿಯುತ್ತಾ ಕಳೆದ ದಿನಗಳ ಬಗ್ಗೆ ನೆನಪಿನ ಆಸರೆಯಿಂದ ತಡೆಯಿಲ್ಲದೆ ಬರೆಯುತ್ತಾ ಹೋಗಬಹುದು. ಆದರೆ ವರ್ತಮಾನದ ಬಗ್ಗೆ, ಈಗಿನ ಪರಿಸರದ ಬಗ್ಗೆ, ಈಗಿನ ಗೆಳೆಯರ ಬಗ್ಗೆ ಬರೆಯಲಿಕ್ಕೆ ಎಂಥದ್ದೋ ಹಿಂಜರಿಕೆ. ಬಹುಶಃ ನನ್ನನ್ನು ನಾನು ಐಡೆಂಟಿಫೈ ಮಾಡಿಕೊಂಡ, ಕೇವಲ ನಿರೂಪಕನಾಗಿರದೆ ನಾನೂ ಒಬ್ಬ ಪಾತ್ರಧಾರಿಯಾಗಿರಬೇಕಾದ ಸನ್ನಿವೇಶದ ಬಗ್ಗೆ ಬರೆಯಲು ಸುಲಭವಾಗಿ ಸಾಧ್ಯವಾಗುವುದಿಲ್ಲ. ನನ್ನ ಅನುಭವಗಳಿಂದ ನಾನು ಹೊರಗೆ ನಿಂತು ನೋಡಲು ಸಾಧ್ಯವಾಗಾದಲೇ ನನ್ನ ಬರವಣಿಗೆಗೆ ಶಕ್ತಿ ತುಂಬಿಕೊಳ್ಳುವುದು.

ಆದರೂ ಬರೆಯಬೇಕು ಎನ್ನಿಸುತ್ತದೆ. ಈ ವಯಸ್ಸಿನ ಬಗ್ಗೆ, ಅದು ಹುಟ್ಟಿಸುವ ಹುಂಬತನದ ಬಗ್ಗೆ, ಈ ವಯೋಮಾನದ ಆದರ್ಶಗಳ ಬಗ್ಗೆ, ಈಗಿನ ತುಡಿತಗಳ ಬಗ್ಗೆ… ನೆತ್ತಿ ವಿಶಾಲವಾದವರು ಕುಳಿತು ಬರೆಯುವ ‘ಈಗಿನ ಹುಡುಗರು…’ ಎನ್ನುವ ಧಾಟಿಯಲ್ಲಿ ಬರೆಯುವುದನ್ನು ಕಂಡರೆ ಮೈ ಉರಿಯುತ್ತದೆ. ಅದಕ್ಕೆ ಉತ್ತರವಾಗಿ ನಮ್ಮ ಸ್ಥಿತಿಗೆ ನಾವೇ ಧ್ವನಿಯಾಗಬೇಕು ಎಂಬ ಹುರುಪು ಮೂಡುತ್ತದೆ.

ಹೀಗೆ ನಮ್ಮ ಬಗ್ಗೆಯೇ ಬರೆಯುವಾಗ, ನಾವು ಗುರುತಿಸಿಕೊಂಡ ಸಂಗತಿಗಳ ಬಗ್ಗೆ ಬರೆಯುವಾಗ ಹಲವಾರು ಅತಿರೇಕಗಳಿಗೆ ತಲುಪಿಕೊಳ್ಳುವ ಅಪಾಯ ಇದ್ದೇ ಇದೆ. ನಮ್ಮ ಹಿರಿಯರು ಈಗಿನ ಕಾಲದ ಹುಡುಗರಿಗೆ ಆದರ್ಶಗಳೇ ಇಲ್ಲ, ಮೌಲ್ಯಗಳೇ ಇಲ್ಲ, ಕನಸುಗಳೇ ಇಲ್ಲ ಎಂದಾಗ ಸಹಜವಾಗಿ ನಾನು ಕೆರಳುತ್ತೇನೆ. ಈ ಕೆರಳುವಿಕೆಗೆ ಅವರ ಆರೋಪದಲ್ಲಿನ ಅಸತ್ಯ ಸ್ವಲ್ಪ ಪಾಲು ಕಾರಣವಾದರೆ, ಹೆಚ್ಚಿನಂಶ ಅವರ ಆರೋಪವನ್ನು ವೈಯಕ್ತಿಕವಾಗಿ ಭಾವಿಸಿದ್ದಕ್ಕಾಗಿ ಹುಟ್ಟಿದ ಅಸಮಾಧಾನ ಕಾರಣವಾಗಿರುತ್ತದೆ. ಆಗ, ‘ಯಾರ್ರೀ ಹೇಳಿದ್ದು ಇವತ್ತಿನ ಯುವಕರಿಗೆ ಆದರ್ಶಗಳು ಇಲ್ಲ ಅಂತಾ? ಯುವಕರು ಅಂತ ಮಾತನಾಡುವಾಗ ನಿಮ್ಮ ಕಣ್ಣಿಗೆ ಹಾದಿ ತಪ್ಪಿದ ಕೆಲವೇ ಯುವಕರು ಕಣ್ಣಿಗೆ ಬೀಳುವುದು ಏಕೆ? ನೀವುಗಳು ಹೊಟ್ಟೆ ಪಾಡಿಗಾಗಿ ಕಟ್ಟಿಕೊಳ್ಳುವ ಪಂಥ, ಪಂಗಡಗಳಿಗೆ ಪ್ರಾಮಾಣಿಕವಾಗಿ ಬೆವರು ಹರಿಸಲು ನೀವು ಬೇಟೆಯಾಡುವ ಯುವಕರು ನಿಮ್ಮ ಕಣ್ಣಿಗೆ ಬೀಳುವುದಿಲ್ಲವಾ? ಯಾರು ಹೇಳಿದ್ದು ಯುವಕರಿಗೆ ಕನಸುಗಳಿಲ್ಲ ಅಂತ? ನಿಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅದ್ಭುತ ಬೆಳವಣಿಗೆಗಳಿಗೆ, ಬದಲಾವಣೆಗಳಿಗೆ, ಪ್ರಗತಿಗೆ ಸಂಪತ್ತಿನ ಸೃಷ್ಥಿಗೆ ಯುವಕರ ಕನಸುಗಾರಿಕೆಯೇ ಕಾರಣವಲ್ಲವೇ? ತ್ಯಾಗದ ಬಗ್ಗೆ ಮಾತನಾಡುವಾಗ ಲಕ್ಷಾಂತರ ಮಂದಿ ಯುವ ಯೋಧರು ಕಣ್ಣಿಗೆ ಬೀಳುವುದಿಲ್ಲವಾ…’ ಎನ್ನುವ ಧಾಟಿಯಲ್ಲಿಯೇ ಉತ್ತರ ಬರುತ್ತದೆ. ತಮ್ಮ ಸುಖಕ್ಕಾಗಿ, ಸ್ವಾರ್ಥಕ್ಕಾಗಿ ಕೆಲವರು ಕಂಡುಕೊಂಡ ಮಾರ್ಗಗಳೇ ಯುವಕರ ಆದರ್ಶಗಳು ಎಂದು ಬಿಂಬಿಸಬಯಸುವ ಕೆಲವು ಯುವಕರನ್ನು ಕಂಡಾಗ, ವಿಕೃತಿಯನ್ನು ವಿದೇಶಿ ಸಂಸ್ಕೃತಿಯ ಹೆಸರಿನಲ್ಲಿ ಪಾಲಿಸುತ್ತಾ ಅದನ್ನೇ grammar of young generation ಎಂದು ಹೇರಲು ಮುಂದಾಗುವ ಯುವಕ-ಯುವತಿಯರನ್ನು ಕಂಡಾಗ ಸಹಜವಾಗಿ ಇನ್ನೊಂದು ಅತಿರೇಕ ತಲುಪಿ ‘ನನ್ನ ಸಹೋದರ/ಸಹೋದರಿಯರೇ ನಿಮಗೇನಾಗಿದೆ? ನಿಮಗ್ಯಾವ ಮೋಹ ಕವಿದಿದೆ?’ ಎಂದು ಕೇಳಬೇಕಾಗಿರುತ್ತದೆ.

ಆದರೂ ಬರೆಯಬೇಕನ್ನಿಸುತ್ತದೆ… ಇನ್ನು ಮುಂದಿನ ನನ್ನ ಬರಹಗಳಲ್ಲಿ ಈ ಪ್ರಯತ್ನವನ್ನು ನೀವು ಅಲ್ಲಲ್ಲಿ ಕಾಣಬಹುದು.

…………………………………..

ಶೇಷ ವಿಶೇಷ: ಓಶೋ ನನ್ನ ಪಾಲಿಗೆ ಒಂದು ಶುದ್ಧ ಉನ್ಮಾದದ ಅಲೆ. ಒಂದೇ ಏಟಿಗೆ ನಮ್ಮೆಲ್ಲಾ ಚಿಂತನೆ, ಆದರ್ಶ, ನೈತಿಕತೆಗಳ ಗೋಡೆಗಳನ್ನು ನುಚ್ಚುನೂರಾಗಿಸುವಂತೆ ಕೊಚ್ಚಿ ಕೊಂಡುಹೋಗಬಲ್ಲ ಅಲೆ. ಆತನನ್ನು ಎದುರಿಸುವುದಕ್ಕಾಗಿ, ಆತನೊಂದಿಗೆ ಅನುಸಂಧಾನ ಮಾಡಿಕೊಳ್ಳುವುದಕ್ಕಾಗಿ ಅಂತಲೇ ಒಂದು ಬ್ಲಾಗನ್ನು ತೆರೆದೆ. ಆದರೆ ತುಂಬಾ ದಿನಗಳಿಂದ ಏನನ್ನೂ ಬರೆಯಲಾಗಲಿಲ್ಲ.

ಈ ನಡುವೆ ಬ್ಲಾಗಿನ ಅಂಗಳದಲ್ಲಿ ಹತ್ತಿರವಾದ ಅಕ್ಕ ಚೇತನಾ ತೀರ್ಥಹಳ್ಳಿ ತಮ್ಮ ಬ್ಲಾಗಿನಲ್ಲಿ ಓಶೋ ಬಗ್ಗೆ ನೆನಪಿಸಿದಾಗಿನಿಂದ ಏನಾದರೂ ಮಾಡಲೇಬೇಕೆಂಬ ಹೊಸ ಹುಮ್ಮಸ್ಸು ಬಂದಿದೆ. ವಿವರಗಳಿಗಾಗಿ ಈ ಲಿಂಕನ್ನು ಸಂದರ್ಶಿಸಿ.

ಮರಳಿ ಗೂಡಿಗೆ…

ತುಂಬಾ ದಿನಗಳಿಂದ ಎದೆಯೊಳಗಿನ ಹಕ್ಕಿಯ ಹಾಡಿಗೆ ಧ್ವನಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಕೆಲಸದ ಮಧ್ಯೆ ಸವಡು ಮಾಡಿಕೊಂಡು ಹಕ್ಕಿಯ ಗೂಡಿಗೆ ಹಿಂದಿರುಗಿರುವೆ.

ಕಳೆದ ಲೇಖನದಲ್ಲಿ ನಾನು ನನ್ನ ವೈಚಾರಿಕ ನಿಲುವಿನ ನೆಲೆಯನ್ನು ಕಂಡುಕೊಳ್ಳುವುದರಲ್ಲಿನ ಪೇಚಾಟವನ್ನು ವಿವರಿಸಿದೆ. ಯಾವ ಸಿದ್ಧಾಂತಗಳಿಗೂ ಬದ್ಧನಾಗಲು ಅನರ್ಹನಾಗಿರುವುದು ನನ್ನ ವೈಚಾರಿಕ ಅಲೆಮಾರಿತನವೋ ಅಥವಾ ಹಿರಿಮೆಯೋ ಎಂಬ ಗೊಂದಲದಿಂದ ನಾನು ಪಾರಾಗಲು ಸಾಧ್ಯವಾಗಿಲ್ಲ. ನನ್ನ ‘ಆವರಣ’ದ ಓದು ಹಾಗೂ ಅದಕ್ಕೂ ಮುನ್ನ ಓದಿದ್ದ ರವೀಂದ್ರನಾಥ ಠಾಗೋರರ ‘ಗೋರಾ’ ಇವೆರಡು ನನ್ನ ಮೇಲೆ ಮಾಡಿದ ಪ್ರಭಾವಗಳ ಬಗ್ಗೆ ಬರೆದಿದ್ದೆ.

ಅಂದು ಹಾಗೆ ಆಲೋಚಿಸಲಿಕ್ಕೆ, ಆ ಇಬ್ಬರು ಲೇಖಕರ ಬರಹಗಳನ್ನು ನೆನಪು ಮಾಡಿಕೊಳ್ಳಲಿಕ್ಕೆ ಕಾರಣವಾಗಿದ್ದು ಒಂದು ಪುಸ್ತಕ. ‘ಆವರಣ ಸಂಕಥನ’ ಎಂಬ ಹೆಸರಿನ ಆ ಪುಸ್ತಕದ ಪರಿಚಯವನ್ನು ನಾನು ಸಾಪ್ತಾಹಿಕ ಪುರವಣಿಗಳಲ್ಲಿ ಓದಿದ್ದೆ. ‘ಆವರಣ’ ಹಾಗೂ ಅದರ ಆಸುಪಾಸಿನ ವಿವಾದವನ್ನು ಕೇಂದ್ರವಾಗಿಟ್ಟುಕೊಂಡು ಎಡಪಂಥೀಯ ಚಿಂತನೆಗಳ ನೆಲೆ, ಸ್ವರೂಪ, ಗಮ್ಯ ಅವುಗಳ ಭಂಡತನವನ್ನು ಅನಾವರಣಗೊಳಿಸುವ ಕೃತಿ ಅದಾಗಿದೆ ಎಂಬುದನ್ನು ನಾನು ಕೃತಿ ಪರಿಚಯ ಲೇಖನಗಳಿಂದ ತಿಳಿದೆ.

ಆ ಕೃತಿಯಲ್ಲಿ ಲೇಖಕರು ಎತ್ತಿದ ಕೆಲವು ಪ್ರಶ್ನೆಗಳು ನಿಜಕ್ಕೂ ನನಗೆ ಗಮ್ಮತ್ತಿನವು ಎನ್ನಿಸಿದವು. ಅಲ್ಪಸಂಖ್ಯಾತ-ಬಹುಸಂಖ್ಯಾತ ಎಂಬ ವರ್ಗೀಕರಣದ ಅತಾರ್ಕಿಕತೆಯ ಬಗ್ಗೆ ಒಂದು ಸ್ವಾರಸ್ಯಕರವಾದ ವಿಶ್ಲೇಷಣೆಯನ್ನು ಮಾಡುತ್ತಾ ಅವರು, ಹಿಂದೂ ಎಂದರೆ ವೈದಿಕ ಪರಂಪರೆಯನ್ನು ಪಾಲಿಸುವವರು ಎಂಬ ಸೀಮಿತ ಅರ್ಥ ಇತ್ತೀಚೆಗೆ ಚಾಲ್ತಿಯಲ್ಲಿದೆ. ಕಾರಣವಿಷ್ಟೇ, ಸುಪ್ರೀಮ್ ಕೋರ್ಟು ಹಿಂದೂ ಎಂಬುದು ಒಂದು ಜೀವನವಿಧಾನ ಎಂದು ಹೇಳಿದ್ದರೂ ದಲಿತರು, ಅವೈದಿಕರು ತಮ್ಮನ್ನು ತಾವು ಹಿಂದೂ ಎಂದು ಕರೆಸಿಕೊಳ್ಳಲು ಒಪ್ಪುವುದಿಲ್ಲ. ‘ಹಿಂದೂ’ ಸಮಾಜದ ಮುಕ್ಕಾಲು ಭಾಗ ಹೀಗೆ ತಮ್ಮ ಹಿಂದೂ ಐಡೆಂಟಿಟಿಯನ್ನು ತೊರೆದರೆ ಉಳಿದ ‘ಹಿಂದು’ಗಳೇ ಅಲ್ಪಸಂಖ್ಯಾತರಾಗುವುದಿಲ್ಲವೇ? ಎಂಬ ಅರ್ಥಕೊಡುವ ಅವರ ವಾದಕ್ಕೆ ನಾನು ಆಕರ್ಷಿತನಾದೆ. ಇಂಥದ್ದೇ ಹಲವಾರು ನೈಜ ವಿಶ್ಲೇಷಣೆಗಳುಳ್ಳ ಕೃತಿ ಅವರದ್ದು ಎಂದು ತಿಳಿದು ಅದನ್ನೋದುವ ಆಸಕ್ತಿ ಹೆಚ್ಚಿತು. ಅವಕಾಶವಾದಾಗ ಪುಸ್ತಕ ಓದುವೆ. ಅದರ ಬಗ್ಗೆ ಬರೆಯುವೆ.

*****

ಈ ಮಧ್ಯೆ ಸಂತೋಷದ ಸಂಗತಿಯೊಂದನ್ನು ತಡವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕನ್ನಡದಲ್ಲಿರುವ ಹಲವಾರು ವಾರ ಪತ್ರಿಕೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಯಿಂದಾಗಿ ವಿಶೇಷ ಛಾಪು ಮೂಡಿಸಿರುವ ‘ವಿಕ್ರಾಂತ ಕರ್ನಾಟಕ’ ದ ಸ್ಥಾಪಕರು ಹಾಗೂ ನಿಯಮಿತ ಅಂಕಣಕಾರರಾದ ರವಿ ಕೃಷ್ಣಾ ರೆಡ್ಡಿಯವರು ಪ್ರತಿವಾರದ ತಮ್ಮ ಅಂಕಣ ಬರಹಗಳನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸುತ್ತಾರೆ. ಎಷ್ಟೋ ದಿನಗಳಿಂದ ಅವರು ತಮ್ಮ ಬ್ಲಾಗನ್ನು ನಿರ್ವಹಿಸುತ್ತಿದ್ದರೂ ಕನ್ನಡ ಬ್ಲಾಗಿಗರ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ. ಕೆಲವು ಬ್ಲಾಗುಗಳನ್ನು ನಿಯಮಿತವಾಗಿ ಗಮನಿಸುತ್ತಿದ್ದರೂ ಕಮೆಂಟಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಇತ್ತೀಚೆಗೆ ಏಕೋ, ಬ್ಲಾಗ್ ಮಂಡಲದಲ್ಲಿ ಸ್ವಲ್ಪ ಕಾಲದವರೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಮ್ಮ ಮೊಟ್ಟ ಮೊದಲ ಪ್ರತಿಕ್ರಿಯೆಯನ್ನು ಈ ಹಕ್ಕಿಯ ಬ್ಲಾಗಿಗೆ ಬಂದು ನೀಡಿದ್ದಾರೆ. ಹಕ್ಕಿಯ ಬಗ್ಗೆ ಹಾಗೂ ಹಕ್ಕಿಯ ಹಾಡಿನ ಬಗ್ಗೆ ಒಂದೆರಡು ಮಾತನ್ನು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.

ಚಿಕ್ಕವರು ಬರೆಯುತ್ತಿರುವುದನ್ನು ಆಸ್ಥೆಯಿಂದ ಗಮನಿಸುವ, ತಾಳ್ಮೆಯಿಂದ ಓದುವ, ದೊಡ್ಡ ಮನಸ್ಸಿನಿಂದ ಪ್ರೋತ್ಸಾಹಿಸುವ ಹಿರಿಯರು ಹೀಗೆ ಬ್ಲಾಗ್ ಅಂಗಳದಲ್ಲಿದ್ದರೆ ನಮ್ಮಂಥ ಹಕ್ಕಿಗಳಿಗೆ ಹಾಡಲು ಎಂಥಾ ಹುರುಪು, ಅಲ್ಲವೇ? ರವಿಯವರಿಗೆ ಹಕ್ಕಿಯ ಗೂಡಿನ ಪರವಾಗಿ ಥ್ಯಾಂಕ್ಸ್!

Technorati Tags: , , ,

ಎಡ-ಬಲದ ಗುಂಪುಗಳ ಮಧ್ಯೆ…

ಎಡ ಬಲದ ರಾಜಕೀಯದ ಬಗ್ಗೆ ಮಾತನಾಡುವುದಕ್ಕೆ ಬಹಳ ಇದೆ ಅನ್ನಿಸುತ್ತದೆ. ಆದರೆ ನನಗೆ ಇನ್ನೂ ವೈಯಕ್ತಿಕವಾದ ಪೂರ್ವಾಗ್ರಹಗಳಿಂದ ಹೊರಬಂದಿರುವ ಧೈರ್ಯವಿಲ್ಲದಿರುವುದರಿಂದ ಅಂತಹ ಸ್ವತಂತ್ರ ಚರ್ಚೆಗಿಳಿಯಲು ಭಯವಾಗುತ್ತದೆ.

ಮಾರುಕಟ್ಟೆಗೆ ಬಂದ ಭೈರಪ್ಪನವರ ಕಾದಂಬರಿಗಳಲ್ಲಿ ನಾನು ಮೊದಲು ಕೊಂಡು ಓದಿದ್ದು ‘ಆವರಣ’ವನ್ನು. ಅದಕ್ಕೂ ಮೊದಲು ಅವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಲೈಬ್ರರಿಯಿಂದ ತಂದುಕೊಂಡು ಓದಲು ಪ್ರಯತ್ನಿಸಿದ್ದೆ. ಆಗಿನ ನನ್ನ ಮನಸ್ಥಿತಿಯಲ್ಲಿ ಅದು ರುಚಿಸಲಿಲ್ಲ ಅರ್ಧಕ್ಕೆ ಬಿಟ್ಟಿದ್ದೆ. ಹಾಗೆಯೇ ಅನೇಕ ಕಾದಂಬರಿಗಳನ್ನು ಅರ್ಧಕ್ಕೆ ಓದಿ ನಿಲ್ಲಿಸಿದ್ದಿದೆ. ‘ಆವರಣ’ ಮಾರುಕಟ್ಟೆಗೆ ಬರುವ ಹೊತ್ತಿಗೆ ನಾನು ಸ್ವಂತವಾಗಿ ಪುಸ್ತಕ ಕೊಂಡುಕೊಳ್ಳುವ ಸ್ವಾತಂತ್ರ್ಯ ಹಾಗೂ ಸವಲತ್ತನ್ನು ಪಡೆದುಕೊಂಡಿದ್ದೆ ಎಂಬುದಿಲ್ಲಿ ವಿಶೇಷ. ಭೈರಪ್ಪನವರು ಸನಾತನ ಧರ್ಮದ ಹಿರಿಮೆಯನ್ನು ಒತ್ತಿಹೇಳುವವರು, ಗತಕಾಲದ ವೈಭವದ ಸಂಸ್ಖೃತಿಯ ಬಗ್ಗೆ ಹೆಮ್ಮೆಯಿಂದ ಬರೆಯುತ್ತಾರೆ ಎಂಬ ಅವರ ಅಭಿಮಾನಿಗಳ ಮೆಚ್ಚುಗೆಯ ನುಡಿಯೂ, ಭೈರಪ್ಪನವರು ವೈದಿಕತೆಯ ಪುರೋಹಿತರು ಎಂದು ಕುಟುಕುವ ಅವರ ವಿರೋಧಿಗಳ ಮಾತುಗಳನ್ನು ಭೈರಪ್ಪನವರನ್ು ಓದುವ ಮೊದಲೇ ಕೇಳಿದ್ದರಿಂದ ನಾನು ‘ಆವರಣ’ವನ್ನು ಓದುವ ಮೊದಲೇ ನನ್ನ ಮನಸ್ಸು ಅದರ ಧ್ವನಿಯನ್ನು ಗ್ರಹಿಸಲು ಸಿದ್ಧವಾಗಿತ್ತು.

‘ಆವರಣ’ದಲ್ಲಿ ಲಕ್ಷ್ಮಿ ರಜಿಯಾ ಆಗಿ ಬದಲಾದಾಗ ನನಗೆ ವಿಪರೀತ ಭಾವೋದ್ವೇಗ ಉಂಟಾಗಿತ್ತು. ಆಕೆಗೆ ಗೋಮಾಂಸ ತಿನ್ನಿಸಲು ಹರಸಾಹಸ ಮಾಡುವ ಗಂಡನನ್ನು ಕಂಡು ಮೈ ಉರಿದಿದ್ದಿದೆ. ಪ್ರತಿಯೊಂದಕ್ಕೂ ಭಾವನಾತ್ಮಕವಾಗಿ ಪ್ರತಿಕಿಯಿಸುತ್ತಾ ಕಾದಂಬರಿಯನ್ನು ಓದುವುದರಿಂದ ತಪ್ಪಿಸಿಕೊಳ್ಳಲಾಗದಿದ್ದರಿಂದ ನನ್ನ ನಿಲುವುಗಳು ವೈಚಾರಿಕವಾಗಿದ್ದವು, ವಸ್ತುನಿಷ್ಠವಾಗಿದ್ದವು ಎಂದು ಹೇಳುವ ಧೈರ್ಯ ಬರದು. ಹೌದು ಭೈರಪ್ಪನರು ಹೇಳುತ್ತಿರುವುದು ಸತ್ಯ, ಹಿಂದುಗಳು ಈ ಮುಸ್ಲಿಂ ಓಲೈಕೆಯಿಂದಾಗಿ ಎಷ್ಟೆಲ್ಲಾ ಕಷ್ಟ ಅನುಭವಿಸಬೇಕಾಗುತ್ತಿದೆಯಲ್ಲವಾ ಅನ್ನಿಸಿತು. ಹಲವು ಭಾಗಗಳನ್ನು ಓದುವಾಗ ಭಾವೋನ್ಮಾದದಲ್ಲಿ ಕೈಗಳು ಕಂಪಿಸಿದ್ದಿವೆ. ಅನವಶ್ಯಕವಾದ ರೋಷ ಬಂದಿದ್ದಿದೆ. ಬುದ್ಧಿಜೀವಿಗಳನ್ನು ಬಿಂಬಿಸಿರುವ ರೀತಿಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಿದೆ. ಬುದ್ಧಿಜೀವಿಗಳ, ಎಡಪಂಥೀಯರ ಸವಕಲು ವಾದಗಳನ್ನು ಹಿಡಿದುಕೊಂಡು ಗೆಳೆಯರೊಂದಿಗೆ ಮನಸಾರೆ ಚರ್ಚಿಸಿದ್ದಿದೆ. ಅನಂತಮೂರ್ತಿ-ಭೈರಪ್ಪ ವಿವಾದದ ಕೋಲಾಹಲದಲ್ಲಿ ನನ್ನ ಅಭಿಪ್ರಾಯವನ್ನು ಕೊಂಚ ಗರಂ ಆಗಿಯೇ ತೋರ್ಪಡಿಸಿದ್ದಿದೆ. ಈಗ ಹಳೆಯ ವಿವಾದಗಳು ತೆರಯ ಮರೆಗೆ ಸರಿದು ಸುದ್ದಿ ವಾಹಿನಿಗಳ ಬಕಾಸುರ ಹಸಿವಿಗೆ ಹೊಸ ವಿದ್ಯಮಾನಗಳು ವಿವಾದಗಳ ರೂಪ ಪಡೆಯುತ್ತಿರುವಾಗ ಬೇರೆಯದೇ ರೀತಿಯ ಆಲೋಚನೆಗಳು ಬರುತ್ತಿವೆ.

ಆವರಣವನ್ನು ಓದುವುದಕ್ಕೂ ತುಂಬಾ ಹಿಂದೆ ರವೀಂದ್ರನಾಥ ಠಾಗೋರರು ಬರೆದಿರುವ ‘ಗೋರಾ’ ಎಂಬ ಕಾದಂಬರಿಯ ಇಂಗ್ಲೀಷ್ ಅವತರಣಿಕೆಯನ್ನು ಓದಿದ್ದೆ. ಅದರ ಕಥಾ ಹಂದರವನ್ನು ಸರಳವಾಗಿ ಹೇಳಿಬಿಡುತ್ತೇನೆ. ಗೋರಾ (ಕಾದಂಬರಿಯಲ್ಲಿನ ಹೆಸರುಗಳು ಮರೆತು ಹೋಗಿವೆ) ಹಿಂದು ಮನೆತನದಲ್ಲಿ ಬೆಳೆದವನು. ಚಿಕ್ಕಂದಿನಿಂದಲೂ ರಾಷ್ಟ್ರೀಯತೆಯ ಕಿಚ್ಚನ್ನು ತನ್ನೊಳಗೆ ಪಾಲಿಸಿಕೊಂಡು ಬಂದವನು. ಅದು ಬಂಗಾಳದಲ್ಲಿ ಮೂರ್ತಿ ಪೂಜೆ ಮುಂತಾದ ಹಿಂದೂ ಧಾರ್ಮಿಕ ರೀತಿ ರಿವಾಜುಗಳಿಗೆ ಸವಾಲಾಗಿ ಬ್ರಹ್ಮ ಸಮಾಜ ತಲೆ ಎತ್ತುತ್ತಿದ್ದ ಸಮಯ. ಆ ಬದಲಾವಣೆಯ ಅಲೆಯ ವಿರುದ್ಧ ಗೋರಾ ನಿಲ್ಲುತ್ತಾನೆ. ಆತನಲ್ಲಿ ಆರ್ಷ್ಯೇಯವಾದ ಹಿಂದೂ ಧರ್ಮದ ಬಗ್ಗೆ ಅಪಾರವಾದ ಹೆಮ್ಮೆಯಿರುತ್ತದೆ. ಹಿಂದೂ ಸಂಪ್ರದಾಯದಲ್ಲಿದ್ದ ಕೆಲವು ಕೊಂದುಗಳನ್ನು ಎತ್ತಿ ತೋರಿಸುತ್ತಿದ್ದ ಬ್ರಹ್ಮ ಸಮಾಜವನ್ನು ವೈಚಾರಿಕವಾಗಿ ಎದುರಿಸುವ, ಸಮರ್ಥನೆ ಮಾಡಿಕೊಳ್ಳುವ ಪಾಂಡಿತ್ಯ ಅವನಲ್ಲಿರುತ್ತದೆ. ಹಿಂದೂಗಳು ಧಾರ್ಮಿಕ ಕಟ್ಟಳೆಗಳಿಂದ ದೂರ ಸರಿಯುತ್ತಿರುವುದೇ ಅವರ ದೌರ್ಬಲ್ಯತೆಗೆ ಕಾರಣ ಎಂದು ನಂಬಿ ಆತ ಧರ್ಮ ವಿಧಿಸಿದ ಆಚರಣೆಗಳು ಉನ್ಮತ್ತನಾಗಿ ಪಾಲಿಸುತ್ತಿರುತ್ತಾನೆ. ಆತನ ವ್ಯಕ್ತಿತ್ವದ ಘನತೆಗೆ ಎಂಥವರೂ ಮರುಳಾಗಬೇಕು. ಗೋರಾನ ಪಾತ್ರವನ್ನು ಸೃಷ್ಟಿಸುವಾಗ ಠ್ಯಾಗೋರರ ಮೇಲೆ ವಿವೇಕಾನಂದರ ಪ್ರಭಾವವಾಗಿರುವುದು ಸ್ಪಷ್ಟ.

ಆ ಗೋರಾನಿಗೆ ಒಬ್ಬ ಗೆಳೆಯನಿರುತ್ತಾನೆ. ಆತ ಗೋರಾನ ಪ್ರಖರವಾದ ವಿಚಾರಗಳಿಗೆ ಸಾಥ್ ನೀಡುತ್ತಿರುತ್ತಾನೆ. ಇಬ್ಬರೂ ಪತ್ರಿಕೆಗಳಲ್ಲಿ ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ, ಬ್ರಹ್ಮ ಸಮಾಜದ ಖಂಡನೆ ಮಾಡುವ ಲೇಖನಗಳನ್ನು ಬರೆಯುತ್ತಿರುತ್ತಾರೆ. ಹೀಗಿರುವಾಗ ಗೋರಾನ ಗೆಳೆಯ ಒಬ್ಬಾಕೆಯನ್ನು ಪ್ರೀತಿಸಲಾರಂಭಿಸುತ್ತಾನೆ. ಆಕೆಯ ತಂದೆ ಬ್ರಹ್ಮ ಸಮಾಜದ ಮುಂಚೂಣಿಯಲ್ಲಿದ್ದವರು. ಮನೆಯ ಪ್ರತಿ ಸದಸ್ಯರೂ ಸಹ ಬ್ರಹ್ಮ ಸಮಾಜದ ರೀತಿ ನೀತಿಗಳಿಗೆ ಬದ್ಧರಾಗಿರುವವರಾಗಿರುತ್ತಾರೆ. ಮೊದಮೊದಲು ಗೋರಾ ತನ್ನ ಗೆಳೆಯನನ್ನು ‘ಬ್ರಹ್ಮ ಸಮಾಜಿ’ಗಳಿಂದ ದೂರ ಮಾಡಲು ಪ್ರಯತ್ನಿಸುತ್ತಾನೆ ಆದರೆ ಅದರಲ್ಲಿ ವಿಫಲನಾಗುತ್ತಾನೆ. ಅನೇಕ ಸಲ ಗೆಳೆಯನೊಂದಿಗೆ ಅವರ ಮನೆಗೆ ಹೋಗುತ್ತಾನೆ ಅಲ್ಲಿ ತನ್ನ ವೈಚಾರಿಕತೆ ಪ್ರಖರತೆಯಿಂದ ಅವರನ್ನು ದಂಗು ಬಡಿಸುತ್ತಾನೆ. ಗೋರಾನ ಗೆಳೆಯ ಪ್ರೀತಿಸಿದ ಹುಡುಗಿಗೆ ಒಬ್ಬ ಸಹೋದರಿಯಿರುತ್ತಾಳೆ. ಬ್ರಹ್ಮ ಸಮಾಜದ ವಾತಾವರಣದಲ್ಲಿ ಬೆಳೆದವಳಾದ್ದರಿಂದ ಆಕೆಯಲ್ಲಿ ಸ್ವಚ್ಛಂದತೆ, ಸ್ವತಂತ್ರ ವೈಚಾರಿಕ ನಿಲುವನ್ನು ತಳೆಯುವ ಪ್ರಬುದ್ಧತೆಯಿರುತ್ತದೆ. ಆಕೆಗೆ ಗೋರಾನ ವಾದಗಳನ್ನು, ಆತನ ಸಮರ್ಥನೆಗಳನ್ನು ಕೇಳಿ ಸಿಟ್ಟು ಬರುತ್ತಿರುತ್ತದೆ. ಅನೇಕ ಸಲ ಆತನೊಂದಿಗೆ ವಾದಿಸುವುದಕ್ಕೂ ಮುಂದಾಗುತ್ತಾಳೆ. ಆದರೆ ಗೋರಾನಲ್ಲಿ ‘ಈ ಹೆಣ್ಣಿಗೇನು ಗೊತ್ತಿರಲಿಕ್ಕೆ’ ಸಾಧ್ಯ ಎನ್ನುವ ಭಾವನೆಯಿರುವುದನ್ನು ಕಂಡು ಆಕೆ ಇನ್ನಷ್ಟು ಸಿಟ್ಟಾಗುತ್ತಾಳೆ. ಆತನನ್ನು ದ್ವೇಷಿಸಲು ಪ್ರತಿಜ್ಞೆ ಮಾಡಿಕೊಳ್ಳುತ್ತಾಳೆ, ಹಾಗೆ ದ್ವೇಷಿಸುವ ಹಂತದಲ್ಲೇ ಆಕೆಗೆ ಆತನ ವ್ಯಕ್ತಿತ್ವದೆಡೆಗೆ ಮೋಹ ಬೆಳೆಯುತ್ತದೆ. ಆಕೆ ಆತನನ್ನು ಇಷ್ಟಪಡಲು ಶುರುಮಾಡುತ್ತಾಳೆ. ಬಹುಶಃ ಗೋರಾನಿಗೂ ಆಕೆಯ ಮೇಲೆ ಒಲವು ಹುಟ್ಟುತ್ತದೆಯೇನೊ, ನೆನಪಾಗುತ್ತಿಲ್ಲ.

ಇಷ್ಟೆಲ್ಲಾ ನಡೆದಿರುವಾಗ ಕೆಲವು ಅನಪೇಕ್ಷಿತ ಘಟನೆಗಳಿಂದಾಗಿ ಗೋರಾ ಉಗ್ರವಾದ ‘ಹಿಂದುತ್ವ’ವನ್ನು ಅಪ್ಪಿಕೊಳ್ಳುತ್ತಾನೆ. ಆತನನ್ನು ನಾಯಕನೆಂದು ಒಪ್ಪಿಕೊಂಡ ಯುವಕರ ಹಿಂಡು ತಯಾರಾಗಿರುತ್ತದೆ. ಆತ ಧಾರ್ಮಿಕ ಆಚರಣೆಗಳಲ್ಲಿ ತನ್ನನ್ನು ತಾನು ಉಗ್ರವಾಗಿ ತೊಡಗಿಸಿಕೊಳ್ಳುತ್ತಾನೆ. ಹೀಗಿರುವಾಗ ಒಂದು ಸಂದರ್ಭದಲ್ಲಿ ಆತನಿಗೆ ತನ್ನ ಅಸ್ತಿತ್ವವನ್ನೇ ಅಲುಗಿಸುವಂತಹ, ತನ್ನ ವ್ಯಕ್ತಿತ್ವವನ್ನೇ, ತನ್ನ ವೈಚಾರಿಕತೆಯನ್ನೇ ನುಚ್ಚು ನೂರು ಮಾಡುವಂತಹ ಸತ್ಯ ತಿಳಿಯುತ್ತದೆ. ತಾನು ತಿಳಿದಂತೆ ಆತನ ತಂದೆ-ತಾಯಿಗಳು ಅವನ ನಿಜವಾದ ತಂದೆ-ತಾಯಿಯರಾಗಿರುವುದಿಲ್ಲ. ಅಸಲಿಗೆ ಅವನು ಹಿಂದುವೇ ಆಗಿರುವುದಿಲ್ಲ. ಭಾರತದಲ್ಲಿದ್ದ ಒಂದು ಬ್ರಿಟೀಷ್ ದಂಪತಿಗಳಿಗೆ ಆತ ಹುಟ್ಟಿರುತ್ತಾನೆ. ಸಿಪಾಯಿ ದಂಗೆಯ ಸಮಯದಲ್ಲಿ ಬ್ರಿಟೀಷರನ್ನು ಎಳೆದೆಳೆದು ಕೊಲ್ಲುತ್ತಿದ್ದಾಗ ಆ ಕ್ರೈಸ್ತ ತಾಯಿ ತನ್ನ ಮಗುವನ್ನು ಈ ತಂದೆ-ತಾಯಿಗಳ ಸುಪರ್ದಿಯಲ್ಲಿ ಬಿಟ್ಟು ಶಾಶ್ವತವಾಗಿ ದೂರವಾಗಿಬಿಟ್ಟಿರುತ್ತಾಳೆ! ಅಲ್ಲಿಯವರೆಗೆ ಆತನ ವೈಚಾರಿಕತೆಯಿಂದ ಆತನ ವ್ಯಕ್ತಿತ್ವಕ್ಕೆ ಲಭಿಸಿದ್ದ ಘನತೆ ಸುಳ್ಳಾ, ಆತನ ಹುಟ್ಟಿನ ಸತ್ಯದಿಂದಾಗಿ ಆತನ ನಂಬಿಕೆ, ಶ್ರದ್ಧೆಗಳೇ ನಶಿಸಿಹೋಗುತ್ತವಾ?

ಎಂದೋ ಓದಿದ್ದ ಈ ಕಾದಂಬರಿ ‘ಆವರಣ’ ಸಂಬಂಧಿ ಚರ್ಚೆ ನಡೆಯುವಾಗ ನೆನಪಿಗೆ ಬರಲಿಲ್ಲ. ಅದು ಈಗ ನೆನಪಾಗಿದ್ದುದಕ್ಕೆ ಕಾರಣವಿದೆ. ಅದನ್ನ ಮುಂದಿನ ಪೋಸ್ಟಿನಲ್ಲಿ ಹೇಳುವೆ.

………………………………………………………….
ಶೇಷ ವಿಶೇಷ: ಈಸೋಪನ ನೀತಿಕತೆಗಳು ಬಹುಶಃ ನಾನು ಓದಲು ಪ್ರಾರಂಭಿಸಿದ ಮೊದಲ ಪಠ್ಯೇತರ ಪುಸ್ತಕ! ನಮಗೆ ಪಠ್ಯದಲ್ಲೇ ಬಹುಶಃ ಮೂರನೆಯ ತರಗತಿಯಲ್ಲಿ ಅನ್ನಿಸುತ್ತದೆ, ಆಮೆ ಹಾಗೂ ಮೊಲದ ಓಟದ ಸ್ಪರ್ಧೆಯ ಕಥೆ ಇತ್ತು. ಆ ಬಗೆಯ ಕತೆಗಳಲ್ಲಿ ಸಹಜವಾಗಿ ಆ ವಯಸ್ಸಿನಲ್ಲಿ ಅಪಾರ ಆಸಕ್ತಿಯಿರುತ್ತಿತ್ತು.
ಬೆಳೆಬೆಳೆದಂತೆ ಚಂದ ಮಾಮಾ ಕತೆಗಳ ಹಾಗೆಯೇ ಈ ಈಸೋಪನ ಕಥೆಗಳನ್ನು ಬಿಟ್ಟು ಮುಂದೆ ನಡೆದೆ. ಆದರೆ ‘ಸಂಪದ’ದಲ್ಲಿ ಇತ್ತೀಚೆಗೆ ಒಬ್ಬರು ಅಷ್ಟೇನು ಪರಿಚಿತವಲ್ಲದ ಈಸೋಪನ ಕಥೆಗಳನ್ನು ಸಂಗ್ರಹಿಸಿ ಕೊಡುತ್ತಿರುವುದು ಕಂಡು ನನ್ನ ಆಸಕ್ತಿ ಕೆರಳಿತು. ಈ ಕಥೆಯನ್ನೇ ನೋಡಿ:
ಮಿಡಿತೆಗಳ ಚಿರಿಗುಟ್ಟುವ ಧ್ವನಿ ಕೇಳಿದ ಕತ್ತೆಯೊಂದಕ್ಕೆ ಆಸಕ್ತಿ ಮೂಡಿತು. ಅಂಥದೇ ಇಂಪಾದ ಧ್ವನಿ ತನಗೂ ಬೇಕೆಂದು ಬಯಸಿ ಇಂಥ ಇಂಪಾದ ಕಂಠ ಪಡೆಯಲು ನೀವು ಅದೇನು ಆಹಾರ ಸೇವಿಸುತ್ತೀರಿ ಎಂದು ಅದು ಮಿಡಿತೆಗಳನ್ನು ಕೇಳಿತು. “ನಾವು ಮಂಜಿನ ಹನಿ ಕುಡಿಯುತ್ತೇವೆ” ಎಂದು ಮಿಡಿತೆಗಳು ಹೇಳಿದವು. ತಾನು ಇನ್ನು ಮುಂದೆ ಮಂಜಿನ ಹನಿಗಳನ್ಬು ಕುಡಿದೇ ಬದುಕುತ್ತೇನೆ ಎಂದು ನಿರ್ಧರಿಸಿತು. ಹಾಗೇ ಮಾಡುತ್ತ ಕೆಲವೇ ದಿನಗಳಲ್ಲಿ ಹಸಿವಿನಿಂದ ಸತ್ತೂ ಹೋಯಿತು.
ಒಂದು ಝೆನ್ ಕಥೆಯಾಗಬಹುದಾದಂಥದ್ದು ಇಂಥವು ಸಹ ಈಸೋಪ ಎಂಬ ಗುಲಾಮನಾಗಿ ಕೆಲಸಮಾಡುತ್ತಿದ್ದ ವ್ಯಕ್ತಿಯಿಂದ ಸೃಷ್ಟಿಯಾದವು ಎಂದರೆ ಆಶ್ಚರ್ಯವಾಗುವುದಿಲ್ಲವೇ?


Technorati : , , , , ,

ಎಷ್ಟೆಲ್ಲಾ ತಾಯಂದಿರು! ಅಷ್ಟೇ ಕವಿತೆಗಳು!

ಇತ್ತೀಚೆಗೆ ಅಹಂ ಎನ್ನುವುದು ನನ್ನ ತಲೆಯೇರಿ ಕುಳಿತಿದೆ. ‘ನಾನು ಚೆನ್ನಾಗಿ ಬರೆಯ ಬಲ್ಲೆ’ ಎನ್ನುವ ಮನಸ್ಸಿನಾಳದ ಸಣ್ಣ ಅಹಂ ಸಾಕಲ್ಲವಾ ನಮ್ಮ ಬರವಣಿಗೆಯ ಆರೋಗ್ಯವನ್ನು ಹಾಳು ಮಾಡಿಹಾಕಲು? ನನಗೆ ಆ ಹೆದರಿಕೆ ಶುರುವಾಗಿದೆ.

ಆದರೂ ನನಗೆ ಬರೆಯದಿರಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಬರವಣಿಗೆಯ ಬಗ್ಗೆ ಬರೆಯುವುದೆಂದರೆ ಮನಸ್ಸು ಉಲ್ಲಾಸದಿಂದ ಪುಟಿಯುತ್ತದೆ. ಎಂಥೆಂಥವೋ ರಸವತ್ತಾದ ಒಳನೋಟಗಳು ದಕ್ಕಿದಂತೆ ಭಾಸವಾಗುತ್ತದೆ. ಆದರೆ ಆ ಬಗ್ಗೆ ಹೆಚ್ಚು ಹೆಚ್ಚು ಬರೆಯಲು ಏನೋ ಆತಂಕ, ಅದನ್ನು ಬರೆಯುವಷ್ಟು ದೊಡ್ದವನಾಗಿದ್ದೀನಾ ಎನ್ನುವ ಹಿಂಜರಿಕೆ ಜೊತೆಗೇ ಯಾರದರೂ ಹಾಗೆ ಕೇಳಿಬಿಟ್ಟರೆ ಏನಂತ ಉತ್ತರಿಸುವುದು ಎನ್ನುವ ಆತಂಕ.

ಆದರೂ ಬರೆಯದಿರಲು ನನ್ನ ಕೈಲಿ ಸಾಧ್ಯವಾಗುತ್ತಿಲ್ಲ. ಕವಿತೆ ಹಾಗೂ ಕವಿಯ ನಡುವಿನ ಸಂಬಂಧವನ್ನು ಹಿಂದೆ ಒಂದು ಪೋಸ್ಟಿನಲ್ಲಿ ತೋಚಿದಂತೆ ಗೀಚಿದ್ದೆ. ಮಗುವನ್ನು ಒಂಭತ್ತು ತಿಂಗಳು ತನ್ನೊಡಲಲ್ಲಿ ಹೆರುವ ತಾಯಿಯ ಸ್ಥಿತಿ ಕವಿಯದ್ದು. ಕವಿತೆ ಕವಿಯ ಒಳಗೆ ಇದೆಯಾದರೂ ಆತನ ಒತ್ತಾಯಕ್ಕೆ, ಆತನ ಬಲಾತ್ಕಾರಕ್ಕೆ ಅದು ಹೊರಬರಲಾರದು. ಹಾಗೊಂದು ವೇಳೆ ಅದು ಹೊರಬಂದರೂ ಜೀವಂತವಾಗಿ ಉಳಿಯಲಾರದು. ಮಾಂಸದ ಮುದ್ದೆಯಾದ ಮಗು ತಾಯಿಯ ಗರ್ಭದಲ್ಲೇ ಮಿಸುಕಾಡುತ್ತಾ ಬೆಳೆದು ಒಂದು ದಿನ ಹೊರಬರುವ ಮನಸ್ಸು ಮಾಡಿ ಕೈಕಾಲು ಜಾಡಿಸುತ್ತದಲ್ಲ ಹಾಗೆಯೇ ಕವಿತೆ ಕವಿಯ ಪ್ರಜ್ಞೆಯ ಆಳದಲ್ಲಿ ಮಿಸುಕಾಡುತ್ತಾ, ಜೀವಕಳೆಯನ್ನು ತುಂಬಿಕೊಳ್ಳುತ್ತಿರುತ್ತದೆ. ಅಲ್ಲಿಯವರೆಗೆ ಕವಿ ಒಳ್ಳೆಯ ತಾಯಿಯ ಹಾಗೆ ತನ್ನ ಗರ್ಭವನ್ನು ಪೊರೆಯುತ್ತಿರಬೇಕು. ಆರೈಕೆ ಮಾಡುತ್ತಿರಬೇಕು. ಒಂದು ದಿನ ಮಗು ತಾಯಿಯ ಹೊಟ್ಟೆಯನ್ನೇ ಸೀಳಿ ಹೊರಬರುವ ಉನ್ಮಾದವನ್ನು ತೋರುತ್ತದಲ್ಲ, ಹಾಗೆಯೇ ಕವಿತೆ ಕವಿಯೊಳಕ್ಕೆ ಕೂತಿರಲಾಗದೆ ಚಡಪಡಿಸುತ್ತದೆ. ಅದು ಆಗ ಹೊರಬರಲೇ ಬೇಕು, ಹಾಗೆ ಹೊರಬರುವಾಗ ಅದು ತಾಯಿಗೆ ವಿಪರೀತ ಯಾತನೆಯನ್ನು ಕೊಡುತ್ತದೆ. ಕವಿತೆ ಸೃಷ್ಟಿಯಾಗುವಾಗ ಕವಿಯೂ ಇದೇ ಬಗೆಯ ಸೃಜನಾತ್ಮಕ ನೋವಿನಲ್ಲಿ, ಸಂಕಟದಲ್ಲಿ ಬೇಯುತ್ತಾನೆ. ಒಮ್ಮೆ ಹೀಗೆ ಉನ್ಮಾದದಲ್ಲಿ ಹೊರ ನುಗ್ಗಲು ಬಯಸುವ ಕವಿತೆಗೆ ಕವಿ ತತ್ ಕ್ಷಣದಲ್ಲಿ ಅಭಿವ್ಯಕ್ತಿಯನ್ನು ಕೊಡಬೇಕು. ಇಲ್ಲವಾದಲ್ಲಿ ಉನ್ಮಾದ ಕಳೆದುಕೊಂಡ ಆ ಕವಿತೆ ಆತನೊಳಗೇ ಇಂಗಿಹೋಗುತ್ತದೆ. ಸಮಯವಾದರೂ ಮಗುವನ್ನು ಬಿಡುಗಡೆಗೊಳಿಸದ ತಾಯಿ ಅದರ ಶತೃವಾಗುತ್ತಾಳೆ. ಅದರ ಕತ್ತು ಹಿಸುಕಿ ಕೊಲ್ಲುತ್ತಾಳೆ.

ಇಲ್ಲಿ ಕವಿತೆ ಎಂದು ಕರೆದಿರುವುದು ಎಲ್ಲಾ ಬಗೆಯ ಸೃಜನಾತ್ಮಕ ಅಭಿವ್ಯಕ್ತಿಯನ್ನು ಉದ್ದೇಶಿಸಿದುದಾಗಿದೆ. ಒಂದು ಕಥೆಯ ಹುಟ್ಟು, ಒಂದು ಕಲಾಕೃತಿಯ ಸೃಷ್ಟಿ ಹೀಗೇ ಆಗುವಂಥದ್ದು. ಏಕಾಂತದಲ್ಲಿ ಸೃಜನಶೀಲತೆಯ ಸೃಷ್ಟಿ ನಡೆಯುವಾಗ ಬರಹಗಾರನಿಗೆ ಅಥವಾ ಕಲಾವಿದನಿಗೆ ವಿಪರೀತವಾದ ಕಿರಿಕಿರಿಯಾಗುತ್ತಿರುತ್ತದೆ. ಎಷ್ಟೋ ಸಲ ಅರ್ಧಕ್ಕೆ ನಿಲ್ಲಿಸಿದ ಕವಿತೆಗೆ ಒಂದೇ ಒಂದು ಹೊಸ ಸಾಲನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ತನ್ನೊಡಲಲ್ಲಿರುವ ಜೀವ ಕಿರಿಕಿರಿಯುಂಟು ಮಾಡಿದಾಗ ಬಹುಶಃ ತಾಯಿಗೂ ಇದೇ ಬಗೆಯ ಸಂಕಟವಾಗುತ್ತದೆಯೇನೊ. ಅಸ್ತಿತ್ವವನ್ನೇ ಪ್ರಶ್ನಿಸುವಂತಹ ಸಂಕಟ.

ತನ್ನೊಳಗೆ ಮಾಗಿದ ಜೀವಕ್ಕೆ ಬಿಡುಗಡೆ ನೀಡಿದ ಕ್ಷಣದಲ್ಲಿ ಮಗು ಹುಟ್ಟುತ್ತದೆ. ತಾಯಿಯೂ ಹುಟ್ಟುತ್ತಾಳೆ. ಮನದೊಳಗಿನ ಭಾವಕ್ಕೆ ಅಭಿವ್ಯಕ್ತಿ ದೊರೆತ ಕ್ಷಣದಲ್ಲಿ ಕವಿತೆ ಹುಟ್ಟುತ್ತದೆ, ಕಲಾಕೃತಿ ಹುಟ್ಟುತ್ತದೆ, ಕಥೆ ಹುಟ್ಟುತ್ತದೆ, ಕವಿಯೂ ಆಗಲೇ ಹುಟ್ಟುತ್ತಾನೆ. ಹುಟ್ಟಿದ ಮಗುವಿನ ಮುಖ ನೋಡುತ್ತಲೇ ತಾಯಿಗೆ ಹೆರಿಗೆಯ ಎಲ್ಲಾ ನೋವು ಕ್ಷಣಮಾತ್ರದಲ್ಲಿ ಮರೆಯಾಗಿಬಿಡುತ್ತದೆ, ಆ ನೋವೆಲ್ಲಾ ಆಕೆಯಲ್ಲಿ ಸಂತೃಪ್ತಿಯಾಗಿ ಮಡುಗಟ್ಟುತ್ತದೆ. ಕಲಾವಿದನಿಗೂ ತನ್ನ ಕಲಾಕೃತಿಯ ಸೃಷ್ಟಿ ಪೂರ್ಣವಾದ ನಂತರ ಇದೇ ತನ್ನ ಬದುಕಿನ ಅತ್ಯಂತ ಸಂತಸದ ಕ್ಷಣ ಎನ್ನುವ ಸಂತೃಪ್ತಿ ಆವರಿಸುತ್ತದೆ.

ಒಮ್ಮೆ ಮಗುವಿಗೆ ಜನ್ಮ ನೀಡಿದ ನಂತರ ಹೆಣ್ಣಿಗೆ ತಾಯಿಯ ಸ್ಥಾನ ದೊರೆಯುತ್ತದೆಯಾದರೂ ಮಗು ಎಂಬುದು ಈ ಜಗತ್ತಿನಲ್ಲಿ ಪ್ರತ್ಯೇಕವಾದ ಜೀವವೇ. ಮೊದಲು ಮೊದಲು ತಾಯಿಯ ಪ್ರಭಾವದಲ್ಲಿ, ತಾಯಿಯ ಹೆಸರಿನ ಹಂಗಿನಲ್ಲಿ ಮಗು ಅರಳಿಕೊಳ್ಳುತ್ತದೆಯಾದರೂ ಅನಂತರ ಅದು ತನ್ನದೇ ಹಾದಿಯನ್ನು ಹಿಡಿಯಬೇಕು.ತಾನಾಗಿ ಜಗತ್ತನ್ನು ಎದುರಿಸಬೇಕು. ಕವಿಯ ಹೆಸರಿನ ಹಂಗಿನಲ್ಲಿ ಜಗತ್ತಿಗೆ ಕವಿತೆಯ ಪರಿಚಯವಾದರೂ ಕವಿತೆ ಕ್ರಮೇಣ ಕವಿಯ ಹೆಸರಿನ ಋಣದಿಂದ ಹೊರಬರಲೇಬೇಕು. ತಾನೇ ಸ್ವತಂತ್ರವಾಗಿ ಅರಳಿಕೊಳ್ಳಬೇಕು. ಇಷ್ಟಾದ ಮೇಲೆ ಕವಿಯೂ ಕೂಡ ಆ ಕವಿತೆಯ ಒಬ್ಬ ಓದುಗನಾಗುತ್ತಾನೆ. ತಂದೆ ಕೂಡ ಗೆಳೆಯನಾಗುವ ಹಾಗೆ.

ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುತ್ತಾರೆ. ಪ್ರತಿ ಕಲಾವಿದನಿಗೂ ಹಾಗೆಯೇ, ತನ್ನ ಪ್ರತಿಯೊಂದು ಕಲಾಕೃತಿಯೂ ಮುದ್ದಿನದೇ. ಕವಿಗೆ ತನ್ನೆಲ್ಲಾ ಕವಿತೆಗಳೂ ಪ್ರಿಯವಾದವೇ. ತನ್ನ ಮಗ ವಿವೇಕಾನಂದನಾಗದಿದ್ದರೂ ತಾಯಿಗೆ ತನ್ನ ಮಗನೇ ಶ್ರೇಷ್ಟ. ತನ್ನ ಕವಿತೆ ಲೋಕ ಮನ್ನಣೆ ಪಡೆಯದಿದ್ದರೂ ಕವಿಗದು ಮುದ್ದಿನದೇ. ತಾಯಿಗೆ ತನ್ನ ಮಗುವಿನ ಸಾಧನೆ ಹೆಮ್ಮೆ ತಂದು ಕೊಡುತ್ತದೆ. ತನ್ನ ಮಗುವಿಗೆ ಸಿಕ್ಕುವ ಗೌರವ ಮನ್ನಣೆಯಿಂದ ತಾಯಿಗೆ ಸಂತೋಷವಾಗುತ್ತದೆ. ಅದಕ್ಕೆ ಸಿಗುವ ಅಪಮಾನ, ನಿಂದನೆಯಿಂದ ತಾಯಿ ನೊಂದುಕೊಳ್ಳುತ್ತಾಳೆ, ಆದರೆ ಎಂದಿಗೂ ಮಗುವಿನ ಕೈಬಿಡುವುದಿಲ್ಲ. ಕವಿಗೂ ಹಾಗೆಯೇ, ತನ್ನ ಕವಿತೆಗೆ ಮನ್ನಣ್ಣೆ, ಪ್ರಶಸ್ತಿ ಸಿಕ್ಕರೆ ಸಂತೋಷವಾಗುತ್ತದೆ. ನಿಂದನೆ, ಟೀಕೆಗಳು ಬಂದಾಗ ನೋವಾಗುತ್ತದೆ. ಆದರೆ ಆತ ಎಂದಿಗೂ ಕವಿತೆಯನ್ನು ಬಿಟ್ಟುಕೊಡಲಾರ.

ಹಣಕ್ಕಾಗಿ ಮಕ್ಕಳನ್ನು ಹೆರುವ, ಮಾರುವ ತಾಯಂದಿರಿದ್ದಾರೆ. ಹೆತ್ತ ಕಂದಮ್ಮನನ್ನು ಕಳೆದುಕೊಂಡು ‘ಅನಾಥ’ರಾದ ತಾಯಂದಿರಿದ್ದಾರೆ. ಪ್ರತಿಷ್ಠೆಯ ಆಸೆಗೆ ಬಲಿಬಿದ್ದು ಮಕ್ಕಳನ್ನು ಕಳೆದುಕೊಂಡ ತಾಯಂದಿರಿದ್ದಾರೆ. ಬೇರಾವ ಹೆಣ್ಣಿಗೋ ತಾಯಿಯ ಪಟ್ಟ ಕೊಡಲು ಹೆರಲು ಮುಂದಾಗುವ ಸರೋಗೇಟ್ ತಾಯಂದಿರಿದ್ದಾರೆ. ತಾಯಿಯಾಗುವ ಹಪಹಪಿಗೆ ಇನ್ನೊಬ್ಬರ ಮಕ್ಕಳನ್ನು ಕದಿಯುವವರು ಇದ್ದಾರೆ. ತಮ್ಮ ಮಕ್ಕಳನ್ನು ಅವನಂತಾಗು, ಇವನಂತಾಗು ಎಂದು ಬಲಾತ್ಕರಿಸುವವರಿದ್ದಾರೆ… ಎಷ್ಟೆಲ್ಲಾ ತಾಯಂದಿರು! ಅಷ್ಟೇ ಕವಿತೆಗಳು!

ಈ ಪ್ರತಿಮೆಗಳ ಹುಚ್ಚು ಯಾವಾಗ ಬಿಡುತ್ತದೆಯೋ ಗೊತ್ತಿಲ್ಲ.

………………………………………………………………….

ಶೇಷ ವಿಶೇಷ: ವ್ಯವಸ್ಥೆ ಎಷ್ಟು ಮಜವಾದದ್ದಲ್ಲವಾ? ಮನುಷ್ಯನ ಸಮಸ್ತ ಇಂದ್ರಿಯಗಳಿಗೂ, ಪ್ರಜ್ಞೆಗೂ ಮಂಕು ಕವಿಯುವ, ಭ್ರಮೆಯನ್ನು ಹುಟ್ಟಿಸುವ ಕಲೆಯನ್ನು ಎಷ್ಟು ನಾಜೂಕಾಗಿ ಮಾಡುತ್ತದೆಯಲ್ಲವೇ?
ನೋಡಿ, ಈ ವ್ಯವಸ್ಥೆಯ ತುಂಬಾ ಬರೀ ಹಣವೇ ತುಂಬಿಕೊಂಡಿದೆ. ಹಣವಿದ್ದವನಿಗೆ ಮಾತ್ರ ಗೌರವ, ಧನಿಕನಿಗೆ ಮಣೆ ಹಾಕುವ ವ್ಯವಸ್ಥೆ ಎಷ್ಟು ನಯವಂಚಕವಾದದ್ದು ಎಂದೆಲ್ಲಾ ಮಾತನಾಡುವ ವ್ಯಕ್ತಿಗೆ ನಿಜಕ್ಕೂ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಬಂದಿದೆಯೋ ಅಥವಾ ತನ್ನಲ್ಲಿ ಹಣವಿಲ್ಲದ ಕಾರಣ ತನಗೆ ಅಲಭ್ಯವಾಗುತ್ತಿರುವ ಗೌರವ, ಪ್ರಾಮುಖ್ಯತೆಗಾಗಿ ಮರುಗುತ್ತಿದ್ದಾನೆಯೇ ನಿರ್ಧರಿಸುವುದು ಕಷ್ಟದ ಕೆಲಸ. ಯಾಕೆ ಅಂದರೆ ನಮ್ಮ ಮುಂದಿರುವ ಎಷ್ಟೋ ಮಂದಿಯ ಉದಾಹರಣೆಗಳು ಈ ಸತ್ಯದತ್ತ ಬೆರಳು ಮಾಡುತ್ತವೆ. ಸಾಮಾನ್ಯನೊಬ್ಬ ಕಾರಿನಲ್ಲಿ ಓಡಾಡುವವನಿಂದ ಅವಮಾನಗೊಳ್ಳುತ್ತಾನೆ ಹಾಗೂ ಆತನ ಅವಮಾನಕ್ಕೆ ತನ್ನ ಬಳಿ ಕಾರಿಲ್ಲದಿರುವುದೇ ಕಾರಣ ಎಂದುಕೊಂಡು ಹತ್ತಾರು ಕಾರು ಕೊಂಡುಕೊಳ್ಳುವ ಹಾಗೆ ದುಡಿಯುತ್ತಾನೆ ತನ್ನೆಲ್ಲಾ ಸಾಮರ್ಥ್ಯ, ಪ್ರಯತ್ನವನ್ನು ಈ ಗುರಿಯನ್ನು ಮುಟ್ಟುವಲ್ಲಿ ವಿನಿಯೋಗಿಸುತ್ತಾನೆ. ತನ್ನ ಪ್ರಾಮುಖ್ಯತೆ, ಜೀವನದ ಮಹತ್ವವನ್ನಾಗಿ ಆ ಗುರಿಯನ್ನು ಅಪ್ಪಿಕೊಳ್ಳುತ್ತಾನೆ. ಬುದ್ಧಿವಂತಿಕೆ ಇದ್ದರೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದ್ದರಿಂದ ದಡ್ಡ ಎನ್ನಿಸಿಕೊಂಡ ಹುಡುಗ ಎಲ್ಲರನ್ನೂ ಬೆರಗುಗೊಳಿಸುವ ಹಾಗೆ ಪರೀಕ್ಷೆಯಲ್ಲಿ ಅಂಕ ತೆಗೆಯುವ ಹಾಗೆ ಓದಬೇಕು ಎಂದುಕೊಳ್ಳುತ್ತಾನೆ. ಅದಕ್ಕಾಗಿ ತನ್ನ ಬೇರೆಲ್ಲಾ ಆಸಕ್ತಿಯ ಸಂಗತಿಗಳನ್ನು ಕಡೆಗಣಿಸಿ ಓದಲು ಕೂಡುತ್ತಾನೆ.
ಇಲ್ಲಿರುವ ಸ್ವಾರಸ್ಯವನ್ನೇ ಗಮನಿಸಿ. ತಾನು ಎದುರಿಟ್ಟುಕೊಂಡ ಗುರಿಯನ್ನು ಆತ ತಲುಪಿಬಿಟ್ಟರೆ, ವ್ಯವಸ್ಥೆ ಆತನಿಗೆ ಅಭೂತಪೂರ್ವವಾದ, ಪ್ರಜ್ಞೆಗೆ ಮಂಕುಕವಿಸುವಂತಹ ಮನ್ನಣೆಯನ್ನು ಕೊಡುತ್ತದೆ. ವ್ಯವಸ್ಥೆ ತನ್ನನ್ನೇ ತಾನು ಹಿಡಿಯಾಗಿಸಿಕೊಂಡು ಆತನ ಮುಂದೆ ತಲೆಬಾಗಿ ನಿಲ್ಲುತ್ತದೆ. ಪಾಪದ ವ್ಯಕ್ತಿಗೆ ತಾನು ಇಡೀ ವ್ಯವಸ್ಥೆಯನ್ನು ಜಯಿಸಿದ್ದೇನೆ, ವ್ಯವಸ್ಥೆಯನ್ನು ಮಣಿಸಿದ್ದೇನೆ ಎನ್ನುವ ಭ್ರಮೆಯುಂಟಾಗುತ್ತದೆ. ಆದರೆ ಅಸಲಿಗೆ ಆತ ತನ್ನ ‘ಅನಿಕೇತನ’ವಾದ ಚೈತನ್ಯವನ್ನು ಗುರಿಸಾಧನೆಯಲ್ಲಿ ವ್ಯವಸ್ಥೆಗೆ ಮಾರಿಕೊಂಡು ಅದರ ದಾಸನಾಗಿಬಿಟ್ಟುರುವುದು ಗಮನಕ್ಕೇ ಬರುವುದಿಲ್ಲ. ಎಂಥಾ ವಿಪರ್ಯಾಸವಲ್ಲವೇ?


Technorati : , , ,

ಹೀಗೆ… ಲಹರಿಯಲ್ಲಿ…

‘ಅವರು ಅಕಾಡೆಮಿಕ್!’ ಎನ್ನುವ ಮಾತನ್ನು ಕೊಂಚ ಭಯದಿಂದ, ಕೊಂಚ ಅಪಹಾಸ್ಯದಿಂದ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಪತ್ರಕರ್ತರ ಪಾಳೆಯದಲ್ಲೂ ಅಕಾಡೆಮಿಕ್ ವ್ಯಕ್ತಿಗಳ ಬಗ್ಗೆ ಅಂಥಾ ಗೌರವವೇನು ಕಂಡು ಬರುವುದಿಲ್ಲ. ಪಾಂಡಿತ್ಯ ಇದ್ದ ಕಡೆ ಆಕರ್ಷಣೆ ಕಡಿಮೆ, ಬೆರಗು ಕಡಿಮೆ ಎಂದೇ ನಂಬಿಕೊಂಡಿದ್ದಾರೆ ಹಲವರು. ಪಿ.ಎಚ್.ಡಿ ಮಾಡಿದ ವಿಜ್ಞಾನಿಗೆ ನಮ್ಮ ಹಾಗೆ ಸಿನೆಮಾವೊಂದನ್ನು ನೋಡಿ ಆನಂದಿಸಲು ಸಾಧ್ಯ ಎಂಬುದನ್ನು ಕಲ್ಪಿಸಿಕೊಳ್ಳಲೂ ನಮಗೆ ಸಾಧ್ಯವಾಗದು. ಇದೆಲ್ಲಾ ಈಗೇಕೆ ಹೇಳುತ್ತಿದ್ದೇನೆ ಅಂದರೆ, ನಾನು ಅಕಾಡೆಮಿಕ್ ಆಗಬೇಕೆಂದು ಹುಟ್ಟಿದ ಆಸೆಯ ಬಗೆಗಿನ ಮಮತೆ ಹಾಗೂ ಆತಂಕದಿಂದ!

ಸಾಹಿತ್ಯ ಮೀಮಾಂಸೆ, ಭಾಷಾ ಶಾಸ್ತ್ರ, ಕಲಾ ಮೀಮಾಂಸೆ ಮುಂತಾದ ದೊಡ್ಡ ದೊಡ್ಡ ಪದಗಳು ಅನ್ಯಗ್ರಹದ ಸಂಗತಿಗಳಾಗಿ ಕಾಣುತ್ತಿದ್ದ ದಿನಗಳಿದ್ದವು. ಆರ್ಟ್ ಸಿನೆಮಾ ಅಂದರೆ ಏನೋ ಶ್ರೇಷ್ಠವಾದದ್ದು, ಆದರೆ ನಮ್ಮಂಥವರಿಗೆ ಅರ್ಥವಾಗದ್ದು ಏನೋ ಇರುತ್ತದೆ ಎಂದು ನಂಬಿಕೊಂಡಿದ್ದ ದಿನಗಳು ಇದ್ದವು. ಆದರೆ ಅಪರೂಪಕ್ಕೊಮ್ಮೆ ಅಂಥ ಒಂದೆರಡು ಸಿನೆಮಾಗಳನ್ನು ನೋಡಿದಾಗ ಇಷ್ಟೇನಾ ಇವು, ಅನ್ನಿಸುತ್ತಿತ್ತು. ಏನಿದೆ ಇವುಗಳಲ್ಲಿ ಅಂತ ಜನ ಇವಕ್ಕೆ ಶ್ರೇಷ್ಠತೆಯ ಹಣೆಪಟ್ಟಿ ಕಟ್ಟುತ್ತಾರೆ? ಥಿಯೇಟರುಗಳಲ್ಲಿ ಬಿಡುಗಡೆ ಕಾಣುವ ಎಷ್ಟೋ ಸಿನೆಮಾಗಳು ಇವಕ್ಕಿಂತ ಚೆನ್ನಾಗಿ ಇರುತ್ತವಲ್ಲಾ ಎನ್ನಿಸುತ್ತಿತ್ತು. ಚಿಂತಕರು, ಬುದ್ಧಿಜೀವಿಗಳು, ಅಕಾಡೆಮಿಕ್ ಪಂಡಿತರ ಬರಹಗಳನ್ನೋ ಸಾಹಿತ್ಯವನ್ನೋ ಓದಿದಾಗಲೂ ಹಾಗೇ ಅನ್ನಿಸುತ್ತಿತ್ತು. ಇವರೆಲ್ಲರಿಗಿಂತ ಆ ಟ್ಯಾಬ್ಲಾಯ್ಡ್‌ನ ಪತ್ರಕರ್ತನ ಬರಹಗಳು, ಪತ್ರಿಕೆಯ ವಾರದ ಅಂಕಣ ಬರೆಯುವ ಪತ್ರಕರ್ತನ ಚಿಂತನೆಗಳೇ ಎಷ್ಟು ಶ್ರೇಷ್ಠವಲ್ಲವಾ ಎನ್ನಿಸುತ್ತಿತ್ತು. ಆದರೆ ಓದು ಹೆಚ್ಚಾದಂತೆ, ಕಲೆಯ ಸೂಕ್ಷ್ಮಗಳ ಬಗ್ಗೆ ಸಣ್ಣಗೆ ಆಸಕ್ತಿ ಬೆಳೆಯಲಾರಂಭಿಸಿದಂತೆ ಹೈಸ್ಕೂಲಿಗೆ ಬಂದ ಹುಡುಗ ಒಂದನೆಯ ತರಗತಿಯ ಗಣಿತದ ಲೆಕ್ಕಗಳೆಡೆಗೆ ಹೊಂದುವ ಅಸಡ್ಡೆಯ ಭಾವನೆ ನಾನು ಮುಂಚೆ ‘ಶ್ರೇಷ್ಠ’ ಎಂದು ಭಾವಿಸಿದ್ದ ಸಂಗತಿಗಳೆಡೆಗೆ ಮೂಡಲಾರಂಭಿಸಿತು.

ಮುಂಚೆ ಒಣ ಚರ್ಚೆಯಾಗಿ, ಅರ್ಥವಾಗದ ಪದ ಪುಂಜಗಳಾಗಿ ಅಕಾಡೆಮಿಕ್ ಪಂಡಿತರ ಹರಟೆಯಾಗಿ ಕಾಣುತ್ತಿದ್ದ ವಿಚಾರಗಳು ಈಗ ನನಗೆ ತೀರಾ ಆಪ್ತವೆನಿಸುವಂತೆ ಹತ್ತಿರವಾಗುತ್ತಿವೆ. ಕಲೆಯ ಸ್ವರೂಪ ಏನು? ಮನುಷ್ಯನ ಸ್ವಭಾವವೇನು? ಜಾನಪದ ಸ್ಮೃತಿಕೋಶ, ಸಂಸ್ಕೃತಿ, ದೇಶೀಯತೆ ಮುಂತಾದ ಸಂಗತಿಗಳು ನನಗೆ ಮುಂಚಿನ ಹಾಗೆ ಅನ್ಯಗ್ರಹದ ಮೇಲಿನ ವಿದ್ಯಮಾನಗಳಾಗಿ ಕಾಣುತ್ತಿಲ್ಲ. ಸಾಹಿತ್ಯದ ಸಾಹಚರ್ಯದಲ್ಲಿ ಉದ್ಭವವಾಗುವ ಅನೇಕ ಪ್ರಶ್ನೆಗಳಿಗೆ, ಜಿಜ್ಞಾಸೆಗಳಿಗೆ ಅವು ಸಮರ್ಪಕವಾದ ಉತ್ತರಗಳಾಗುತ್ತಿವೆ. ನನಗೆ ತಿಳಿಯದ ಹಾಗೆ ನಾನು ಅಂತಹ ವಿಷಯಗಳ ಆಳಕ್ಕೆ ಇಳಿಯುವ ತುಡಿತವನ್ನು ತೋರ್ಪಡಿಸುತ್ತೇನೆ. ತುಂಬಾ ಹಿಂದೆ ನಾನು ಸತತವಾಗಿ ಬರೆದ ಬ್ಲಾಗು ಬರಹಗಳೆಡೆಗೆ ಒಮ್ಮೆ ಕಣ್ಣು ಹಾಯಿಸಿದಾಗ, ಭಾಷೆಯ ಸಂಕೀರ್ಣತೆ, ಕಲೆಯಲ್ಲಿ ಕಲಾವಿದನ, ಸಾಹಿತ್ಯದಲ್ಲಿ ಸಾಹಿತಿಯ, ವೈಜ್ಞಾನಿಕ ಅನ್ವೇಷಣೆಯಲ್ಲಿ ವಿಜ್ಞಾನಿಯ ಪ್ರಜ್ಞೆಯು ವಿಸ್ತಾರವಾಗುತ್ತಾ ಹೋಗುವುದರ ಬಗ್ಗೆ ಯೋಚಿಸಿದಾಗ ನನಗೆ ದಕ್ಕಿದ ಒಳನೋಟಗಳು ನನಗೇ ಪುಳಕವನ್ನುಂಟು ಮಾಡಿದವು. ಇವೇ ವಿಚಾರಗಳ ಬೆನ್ನು ಹತ್ತಿದವರು ಮೀಮಾಂಸೆ ಬರೆಯುತ್ತಾರೆ. ಗಂಭೀರವಾಗಿ ಅಧ್ಯಯನಕ್ಕೆ ಮುಂದಾಗುತ್ತಾರೆ ಎಂಬುದರ ಅರಿವಾಯಿತು. ಅವರನ್ನು ಬಾಧಿಸಿದ, ಹಸಿವು ನಿದ್ರೆಯನ್ನು ತೊರೆದು ಚಿಂತಿಸುವಂತೆ ಮಾಡಿದ ಪ್ರಶ್ನೆಗಳನ್ನು ನಮ್ಮನ್ನೂ ಅದೇ ಉನ್ಮತ್ತತೆಯಲ್ಲಿ ಕಾಡದಿದ್ದರೆ ಅವರು ಕಂಡುಕೊಂಡ ಒಳನೋಟಗಳು, ಅವರು ಕಂಡುಕೊಂಡ ಸತ್ಯಗಳು ನಮಗೆ ದಕ್ಕುವುದಿಲ್ಲ. ಹೊಟ್ಟೆ ಹಸಿವಾಗದೆ ಹುಗ್ಗಿಯನ್ನು ಉಂಡರೂ ಮುಳ್ಳು-ಮುಳ್ಳಾದಂತೆ ಆ ಬಗೆಯ ವೈಚಾರಿಕ ಹಸಿವು ನಮ್ಮನ್ನು ಕಂಗೆಡುವಂತೆ ಮಾಡದಿದ್ದರೆ ನಮಗೆ ಚಿಂತಕರ, ತತ್ವಜ್ಞಾನಿಗಳ ಚಿಂತನೆ ದಕ್ಕುವುದಿಲ್ಲ.

ಮೊನ್ನೆ ಕುನಾಲ್ ಖೇಮು ಅಭಿನಯಿಸಿರುವ ‘ಸೂಪರ್ ಸ್ಟಾರ್’ಎಂಬ ಹಿಂದಿ ಸಿನೆಮಾ ನೋಡಿದೆ. ಅದರಲ್ಲಿ ಖೇಮು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಸೂಪರ್ ಸ್ಟಾರ್ ಆಗಬೇಕೆಂಬ ಕನಸು ಕಾಣುತ್ತಾ ಸಿನೆಮಾಗಳಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುವ ಮಧ್ಯಮ ವರ್ಗದ ಹುಡುಗನದು ಒಂದು ಪಾತ್ರ. ಕೋಟ್ಯಾಧಿಪತಿ ಅಪ್ಪನ ಒತ್ತಾಯಕ್ಕಾಗಿ ಆತನ ಪ್ರತಿಷ್ಠೆಯ ಹಸಿವು ಇಂಗಿಸುವುದಕ್ಕಾಗಿ ನಟನೆಯಲ್ಲಿ ಯಾವ ಆಸಕ್ತಿಯೂ ಇರದಿದ್ದರೂ ಸೂಪರ್ ಸ್ಟಾರ್ ಆಗುವ ಅನಿವಾರ್ಯತೆಗೆ ಒಪ್ಪಿಸಿಕೊಂಡ ಶ್ರೀಮಂತ ಹುಡುಗನದು ಮತ್ತೊಂದು ಪಾತ್ರ. ಸಿನೆಮಾದ ಓಟದಲ್ಲಿ ಏನೇನೊ ಘಟನೆಗಳು ಜರುಗುತ್ತವೆ. ಶ್ರೀಮಂತ ಹುಡುಗ ಆಕ್ಸಿಡೆಂಟ್ ಒಂದರಲ್ಲಿ ಸಾಯುತ್ತಾನೆ ಅದೇ ಆಕ್ಸಿಡೆಂಟಿನಲ್ಲಿ ಮಧ್ಯಮ ವರ್ಗದ ಕನಸುಗಾರ ಹುಡುಗ ಬದುಕುಳಿಯುತ್ತಾನೆ. ಆತನ ಕೈಲಿದ್ದ ತನ್ನ ಮಗನ ವಾಚ್‍ ಕಂಡು ಶ್ರೀಮಂತ ಹುಡುಗನ ಅಪ್ಪನಿಗೆ ಆತನೇ ತನ್ನ ಮಗ ಅನ್ನಿಸುತ್ತದೆ. ಅನಂತರ ಸತ್ಯವೂ ತಿಳಿಯುತ್ತದೆ. ಆದರೆ ತನ್ನ ಪ್ರತಿಷ್ಠೆಯ ಪಣವಾದ ಸಿನೆಮಾ ಮಾಡುವುದಕ್ಕೆ ಆತ ಬ್ಲಾಕ್ ಮೇಲ್ ಮಾಡಿ ಈ ಮಧ್ಯಮ ವರ್ಗದ ಹುಡುಗನಿಗೆ ತನ್ನ ಮಗನ ಪಾತ್ರವನ್ನು ಮಾಡಬೇಕೆಂದು ಕರಾರು ಹಾಕುತ್ತಾನೆ.

ಅಷ್ಟು ದಿನಗಳವರೆಗೆ ತನ್ನ ಜೀನವದ ಏಕೈಕ ಕನಸಾಗಿದ್ದ ಸೂಪರ್ ಸ್ಟಾರ್ ಪಟ್ಟವನ್ನು ಆತ ಏರುತ್ತಾನೆ. ಆದರೆ ಆತ ತನ್ನತನವನ್ನೇ ಕಳೆದುಕೊಂಡು ಬೇರೊಬ್ಬನ ಹೆಸರಿನ ಆಸರೆ ಪಡೆದಿರುತ್ತಾನೆ. ಇದೆಲ್ಲದರ ನಡುವೆ ಒಂದು ಸೀನ್ ಬರುತ್ತದೆ. ಸತ್ತುಹೋದ ಶ್ರೀಮಂತ ಹುಡುಗನ ಗರ್ಲ್ ಫ್ರೆಂಡ್ ಒಮ್ಮೆ ಏಕಾಂತದಲ್ಲಿ ಈತನಿಗೆ ಮುತ್ತು ಕೊಡಲು ಮುಂದಾಗುತ್ತಾಳೆ. ಶ್ರೀಮಂತ ಹುಡುಗನ ಪಾತ್ರ ವಹಿಸಿದ ಅವನಿಗೆ ಆಕೆಗೆ ಕಿಸ್ ಮಾಡಲು ಸಾಧ್ಯವಾಗುವುದಿಲ್ಲ. ಸಿನೆಮಾದಲ್ಲಿ ಈ ಸೀನ್ ಸಾಮಾನ್ಯವಾದ ಸೀನ್‌ನಂತೆ ಬಂದುಹೋದರು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಹಾಕಿತು. ತೆರಯ ಮೇಲೆ ಒಂದು ಪಾತ್ರವನ್ನು ಆವಾಹಿಸಿಕೊಂಡು, ಆ ಪಾತ್ರವನ್ನೇ ಉಸಿರಾಡುತ್ತಾ, ಆ ಪಾತ್ರದ ದುಃಖಕ್ಕೆ ತಾನೇ ಕಣ್ಣೀರಾಗಿ, ಆ ಪಾತ್ರದ ಸಂವೇದನೆಗಳಿಗೆ ತಾನೇ ಅಭಿವ್ಯಕ್ತಿಯಾಗುವ ನಟನಿಗೆ ತಾನು ಈ ಪಾತ್ರದಲ್ಲಿ ಕೇವಲ ನಟಿಸುತ್ತಿದ್ದೇನೆ, ಈ ನಾಟಕ ಮುಗಿದ ಮೇಲೆ ನನ್ನ ನಿಜ ಜೀವನವಿದೆ ಎಂಬ ಪ್ರಜ್ಞೆ ಇದ್ದಾಗ ಮಾತ್ರ ಆತ ಅಷ್ಟು ತನ್ಮಯನಾಗಿ ನಟಿಸಲು ಸಾಧ್ಯವಾಗುತ್ತದೆಯೇ? ಇದು ಕೇವಲ ನಾಟಕ ಇದನ್ನು ನೋಡುತ್ತಿರುವವರು, ಇಲ್ಲಿ ನನ್ನೊಂದಿಗೆ ಅಭಿನಯಿಸುತ್ತಿರುವವರು, ನನ್ನ ಪ್ರೇಯಸಿಯಾಗಿರುವವಳು, ತನ್ನ ಹೆಂಡತಿಯಾಗಿರುವವಳು, ನನ್ನ ತಂದೆ, ತಾಯಿಯಾಗಿರುವವರು ಸಹ ಪಾತ್ರಧಾರಿಗಳು, ನಾಟಕ ಮುಗಿದ ನಂತರ ನಾನು ಯಾವುದಕ್ಕೂ ಬಾಧ್ಯನಲ್ಲ ಎನ್ನುವ ಭರವಸೆ ಇದ್ದಾಗ ಮಾತ್ರ ಆತ ಉತ್ತಮ ಕಲಾವಿದನಾಗಬಲ್ಲನೇ? ಸಿನೆಮಾವೊಂದರಲ್ಲಿ ತನ್ನತನವನ್ನು ಮರೆತು ಒಂದು ಪಾತ್ರವೇ ತಾನಾಗಿ ಆ ಪಾತ್ರ ಪ್ರೇಮಿಸಬೇಕಾದಾಗ ಪ್ರೇಮಿಸಿ, ಆತ ಹೊಡೆದಾಡುವಾಗ ಹೊಡೆದಾಡುವ ನಟನಿಗೆ ನಿಜಜೀವನದಲ್ಲೂ, ಯಾವ ಸ್ಕ್ರಿಪ್ಟು ಇಲ್ಲದಿರುವಾಗಲೂ ಹಾಗೆಯೇ ನಟಿಸಲು ಸಾಧ್ಯವಾಗುತ್ತದೆಯೇ?

(ಈ ಬರಹ ನನಗೆ ಅಷ್ಟು ತೃಪ್ತಿಯನ್ನು ನೀಡಲಿಲ್ಲ. ಬರೆದ ನಂತರ ಎಂಥದ್ದೋ ಕಸಿವಿಸಿ ಮನಸ್ಸನ್ನು ಕಾಡುತ್ತಿದೆ. ನನ್ನ ಮನಸ್ಸಲ್ಲಿ ಹೊಳೆದ ಭಾವಕ್ಕೆ ತಕ್ಕ ಅಭಿವ್ಯಕ್ತಿಯನ್ನು ನೀಡಲು ಸಾಧ್ಯವಾಗದಿದ್ದಾಗಲೆಲ್ಲಾ ನನಗೆ ಅಪಾರವಾದ ನಿರಾಶೆಯಾಗುತ್ತದೆ. ಕಸಿವಿಸಿಯ ಅನುಭವವಾಗುತ್ತದೆ. ನನ್ನ ಅಭಿವ್ಯಕ್ತಿಯಲ್ಲಿನ ಅಸಂಬದ್ಧತೆ, ಅಪ್ರಬುದ್ಧತೆ, ಅಸ್ಪಷ್ಟತೆ ನಿಮಗೆ ಕಿರಿಕಿಯನ್ನುಂಟುಮಾಡಿದರೆ ಕೊಂಚ ಉದಾರವಾಗಿ ನನ್ನನ್ನು ನೋಡುವ ಕೃಪೆ ಮಾಡಿ. ಸಲಹೆ ನೀಡಿ )

……………………………………………………………………………..

ಶೇಷ ವಿಶೇಷ:‘ಸಂಪದ’ದಲ್ಲಿ ಒಂದು ಚರ್ಚೆ ನಡೆಯುತ್ತಿತ್ತು. ಧರ್ಮದ ಬಗ್ಗೆ, ‘ಹಿಂದು’ ಎನ್ನುವ ಬಗ್ಗೆ ಯಾವುದೇ ಚರ್ಚೆ ನಡೆದರೂ ಅಲ್ಲಿ ರಮೇಶ್ ಸಮಗಾರಎನ್ನುವವರು ಕಂಡುಬರುತ್ತಾರೆ. ಅವರ ದಲಿತ ಪ್ರಜ್ಞೆಯನ್ನು ಕೊಂಚ ಅಗ್ರೆಸಿವ್ ಆಗಿಯೇ ಅಲ್ಲಿ ತೋರ್ಪಡಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಅಲ್ಲಿರುವ ಚರ್ಚೆ, ಹಿಂದು ಮುಸ್ಲೀಂ, ಮೇಲು ಜಾತಿ ದಲಿತರು ಎಂಬ ರೂಪವನ್ನೇ ಪಡೆದುಬಿಡುತ್ತದೆ.
ಅದೇನೇ ಇರಲಿ, ನಾನು ಆರಂಭಿಸಿದ ಒಂದು ಚರ್ಚೆಯಲ್ಲಿ ಅವರು ನೀಡಿದ ಪ್ರತಿಕ್ರಿಯೆ ನನ್ನನ್ನು ಚಿಂತನೆಗೆ ಹಚ್ಚುವಂತಿತ್ತು. ನಾನು ಚಿಂತಕರು, ಸಮಾಜದ ಎಲೈಟ್ ಎನ್ನಿಸಿಕೊಂಡವರ ವರ್ತನೆಯಲ್ಲಿನ ದ್ವಂದ್ವವನ್ನು ಪ್ರಶ್ನಿಸಿ ಒಂದು ಚರ್ಚೆಯನ್ನು ಪ್ರಾರಂಭಿಸಿದ್ದೆ. ಹಿಂದುಗಳ ಧರ್ಮದ ಬೆಗೆಗಿನ ಕೊಂಚ ಅತಿಯೆನಿಸುವಂತಹ ಹೆಮ್ಮೆಯನ್ನು ಕೋಮುವಾದ ಅಂತ ಜರಿದು ಖಂಡಿಸುವ ಇವರು ಮತಾಂಧ ಮುಸ್ಲೀಮರು ನಡೆಸುವ ಪುಂಡಾಟಿಕೆಯನ್ನೇಕೆ ಖಂಡಿಸುವುದಿಲ್ಲ ಎಂಬುದು ನನ್ನ ಪ್ರಶ್ನೆಯಾಗಿತ್ತು. ಅವರು ಕೊಟ್ಟ ಉತ್ತರ ನೇರವಾಗಿ ನನ್ನ ಉತ್ತರಕ್ಕೆ ಸಂಬಂಧಿಸಿರದಿದ್ದರೂ ನನ್ನ ಪ್ರಶ್ನೆಯ ಪ್ರಸ್ತುತತೆಯನ್ನೇ ಪ್ರಶ್ನಿಸುವಂತಿತ್ತು. ‘ನೀವೇಕೆ ಆ ಚಿಂತಕರು, ಬುದ್ಧಿಜೀವಿಗಳು ಪೊಲಿಟಿಕಲಿ ಕರಕ್ಟ್ ಆಗಿರಬೇಕು ಎಂದು ಬಯಸುತ್ತೀರಿ?’ ಇಬ್ಬರಿಗೂ ಬೈದು ಬಿಟ್ಟರೆ, ಇಬ್ಬರನ್ನೂ ಖಂಡಿಸಿಬಿಟ್ಟರೆ ಅವರು ಬದ್ಧತೆ ಉಳ್ಳವರು ಎಂದು ಭಾವಿಸುವ ಮೂಲಕ ಅವರನ್ನು ನಾವಾಗಿಯೇ ತೀರ್ಪುಗಾರರನ್ನಾಗಿ ಮಾಡಿದಂತಾಗುವುದಿಲ್ಲವೇ? ಹಿಂದೂ ಧರ್ಮದ ಬಗ್ಗೆ ಅವರ ಟೀಕೆ ಪ್ರಾಮಾಣಿಕವಾದುದು, ಸತ್ವಯುತವಾದದ್ದೇ ಆದರೆ ಅದನ್ನು ಒಪ್ಪಿಕೊಳ್ಳೋಣ, ಬದಲಾಗುವ ಪ್ರಯತ್ನ ಮಾಡೋಣ. ಇಲ್ಲ, ಅವರ ಟೀಕೆಗಳು ಪೂರ್ವಾಗ್ರಹ ಪೀಡಿತವಾದುವು, ಕೆಣಕುವ ಉದ್ದೇಶ ಹೊಂದಿರುವವು ಎಂಬುದಾದಲ್ಲಿ ನಿರ್ಲಕ್ಷಿಸಿ ಮುನ್ನಡೆಯೋಣ ಅಲ್ಲವೇ?


Technorati : , , ,

ವ್ಯವಸ್ಥೆಯೆಂಬ ಸೆರೆಮನೆಯ ಕುರಿತು

ಮನುಷ್ಯ ನಿಸರ್ಗದಿಂದ ದೂರಾದ ಪ್ರಕ್ರಿಯೆಯ ಮೊದಲ ಹಂತವೇ ವ್ಯವಸ್ಥೆ. ಭೂಮಿಯ ಮೇಲಿನ ಸಕಲೆಂಟು ಜೀವ ಜಂತುಗಳು ಸಹಬಾಳ್ವೆಯಿಂದ ಜೀವಿಸುವುದಕ್ಕೆ ಪ್ರಕೃತಿ ತನ್ನದೇ ಆದ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕವಾದ ಅಸ್ತಿತ್ವವಿದೆ. ಅವಕ್ಕೆ ಪ್ರಕೃತಿ ಕೊಡಮಾಡಿದ ತಮ್ಮವೇ ಆದ ಸಾಮರ್ಥ್ಯಗಳಿವೆ, ದೌರ್ಬಲ್ಯಗಳಿವೆ. ಮನುಷ್ಯ ಪ್ರಕೃತಿಯ ಅನುಸಾರವಾಗಿ ನಡೆದುಕೊಳ್ಳಲು ಇರುವ ಏಕೈಕ ಅಡ್ಡಿಯೆಂದರೆ ಪ್ರಕೃತಿ ವಿಧಿಸುವ ಮಿತಿಗಳು.